
ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ
ರಾಯಚೂರು: ‘ದಲಿತರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದವರೇ ಸಿದ್ದರಾಮಯ್ಯ. ಕಾಂಗ್ರೆಸ್ನಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ ಅವರು ಯಾವತ್ತೋ ಮುಖ್ಯಮಂತ್ರಿ ಆಗಬೇಕಿತ್ತು. ಅವರನ್ನು ಇಲ್ಲಿಂದ ಖಾಲಿ ಮಾಡಿಸಿ ಒಳಗಡೆ ಹುತ್ತಿನಲ್ಲಿ ಸೇರಿಕೊಂಡಿದ್ದಾರೆ‘ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
‘ಪಾಪ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಗೆ ಓಡಿಸಿ, ಪರಮೇಶ್ವರ ಅಧ್ಯಕ್ಷರಿದ್ದರೂ ಅವರನ್ನು ಸೋಲಿಸಿ ಮನೆಗೆ ಕಳುಹಿಸಿ ಸಿದ್ದರಾಮಯ್ಯ ಸಿಎಂ ಆದರು. ದಲಿತರು ಮುಖ್ಯಮಂತ್ರಿ ಆಗುವುದಿದ್ದರೆ ಯಾವುತ್ತೋ ಆಗುತ್ತಿತ್ತು. 75 ವರ್ಷ ಆದರೂ ಏಕೆ ಆಗಲಿಲ್ಲ’ ಎಂದು ಪ್ರಶ್ನಿಸಿದರು.
‘ನಾನು ಕೇಂದ್ರದಲ್ಲಿ ಕೈಗಾರಿಕೆ ಸಚಿವನಾಗಿರುವ ಕಾರಣ ಗೃಹ ಸಚಿವ ಪರಮೇಶ್ವರ ಅವರು ವೈಯಕ್ತಿಕ ಕೆಲಸಕ್ಕೆ ಭೇಟಿ ಮಾಡಿದ್ದಾರೆ. ಅದನ್ನು ಬಿಟ್ಟು ಯಾವುದೇ ರಾಜಕೀಯ ಚರ್ಚೆ ಆಗಿಲ್ಲ‘ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಚೂರಿ ಹಾಕಿಲ್ಲ:
‘ನಾವು ಯಾರ ಬೆನ್ನಿಗೂ ಚೂರಿ ಹಾಕಿಲ್ಲ. ಯಾವಾಗ ದೇವೇಗೌಡರ ಬೆನ್ನಿಗೆ ಚೂರಿ ಹಾಕೋಕೇ ಹೋದ್ರೋ, ಆಗ ಸಿದ್ದರಾಮಯ್ಯ ಮನೆಗೆ ಹೋದರು. ಸಿಎಂ ಸಿದ್ದರಾಮಯ್ಯ ಅವರು ಇವತ್ತು ಮಾನಸಿಕ ಅಸಮತೋಲನಕ್ಕೆ ಒಳಗಾಗಿದ್ದಾರೆ‘ ಎಂದು ಟೀಕಿಸಿದರು.
‘ಸಿಎಂ ಖುರ್ಚಿ ಉಳಿಸಿಕೊಳ್ಳೋದಕ್ಕೆ ಯಾವ್ಯಾವದೋ ಹೆಸರು ಹೇಳುತ್ತಿದ್ದಾರೆ. ನಾನು ಸಿಎಂ ಇದ್ದಾಗ ಖುರ್ಚಿ ಉಳಿಸಿಕೊಳ್ಳೋಕೆ ಒಕ್ಕಲಿಗರಿಗೆ ದಂಗೆ ಏಳಿ ಅಂದಿದ್ನಾ? ನಾನು ಸಮಾಜದ ಹೆಸರಿನಲ್ಲಿ, ಜಾತಿ ಹೆಸರಿನಲ್ಲಿ ರಕ್ಷಣೆ ಕೇಳಿಲ್ಲ‘ ಎಂದರು.
‘ನಾನು ಕುರುಬ ಸಮುದಾಯದಲ್ಲಿ ಕುರಿ ಕಾಯುತ್ತಿರುವವನು, ನನ್ನ ಬೆಳವಣಿಗೆ ಸಹಿಸಲಾಗದೇ ಷಡ್ಯಂತ್ರ ಮಾಡ್ತಿದ್ದಾರೆಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಇದೇ ಕುರಿ ಕಾಯೋವವನನ್ನು ಜಾತ್ಯತೀತ ದಳ ಎರಡು ಬಾರಿ ಡಿಸಿಎಂ ಹಾಗೂ ಹಣಕಾಸು ಸಚಿವರನ್ನಾಗಿ ಮಾಡಿತು. ದೇವೇಗೌಡರು ಕೂರಿಸದೇ ಇದ್ದರೇ ಇವರನ್ನು ಯಾರು ಕೇಳ್ತಾ ಇದ್ದರು’ ಎಂದು ವಾಗ್ದಾಳಿ ನಡೆಸಿದರು.
‘ಸಿದ್ದರಾಮಯ್ಯ ಯಾವ ಒಕ್ಕಲಿಗರನ್ನು ಸಿಎಂ ಮಾಡಲು ನೆರವಾದರು? ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಗೆ ಕರೆದುಕೊಂಡು ಹೋದವರು ಈಗ ಏನಾಗಿದ್ದಾರೆ. ಇವೆನ್ನೆಲ್ಲ ಹೇಳೋಕೆ ಹೋದರೆ ಪುಟಗಟ್ಟಲೇ ಹೇಳಬಹುದು. ಗ್ರಂಥನೇ ಬರೆಯಬಹುದು‘ ಎಂದರು.
‘ಬಾದಾಮಿಯಲ್ಲಿ ನಮ್ಮ ಪಕ್ಷದಿಂದಾಗಿ ಸಿದ್ದರಾಮಯ್ಯಗೆ ಜೀವ ಸಿಕ್ಕಿದ್ದು. ಚಾಮುಂಡೇಶ್ವರಿಯಲ್ಲಿ 36 ಸಾವಿರ ಅಂತರದಲ್ಲಿ ಸೋತಿದ್ದರು. ಈಗ ಯಾವ ಪಕ್ಷದ ಬಗ್ಗೆ ಮಾತನಾಡುತ್ತಾರೆ. ಸಿಎಂ ಆಗುವ ಉದ್ದೇಶದಿಂದ ಶಕ್ತಿ ತುಂಬಿದ ಕಾರ್ಯಕರ್ತರಿಗೆ ಟೋಪಿ ಹಾಕಿದರು. ಅದಕ್ಕೆ ಜೆಡಿಎಸ್ನಿಂದ ಹೊರಗೆ ಹಾಕಿದ್ದು‘ ಎಂದು ಮೊಣಚಾದ ಮಾತಿನಿಂದ ಚುಚ್ಚಿದರು.
‘ಕಾಂಗ್ರೆಸ್ ಹೈಕಮಾಂಡ್ ಇದೆಯೋ, ಇಲ್ವೋ ಗೊತ್ತಿಲ್ಲ’
‘ಕಾಂಗ್ರೆಸ್ ಹೈಕಮಾಂಡ್ ಐಸಿಯುನಲ್ಲಿದೆಯೋ ಎಲ್ಲಿದೆಯೋ, ಅಥವಾ ಇದೆಯೋ, ಇಲ್ವೋ ಗೊತ್ತಿಲ್ಲ’ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವ್ಯಂಗ್ಯ ಮಾಡಿದರು.
‘130 ವರ್ಷ ಇತಿಹಾಸ ಇರುವ ಪಕ್ಷ ಅಂತಾರೆ. ಹೈಕಮಾಂಡ್ಗೆ ಎಸ್ಐಆರ್ ಅನ್ನೋದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಕೇವಲ ಚೈನಾ ಬಾರ್ಡರ್ ವಿಷಯ ಇಟ್ಟುಕೊಂಡು ಕೂತಿದ್ದಾರೆ. ಬನಿಯನ್ ಬಿಚ್ಚಿಕೊಂಡು ಓಡಾಡಿದ್ದಾರೆ‘ ಎಂದು ಟೀಕಿಸಿದರು.
‘ಕಳೆದ ಎರಡೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿ ಜಾಹೀರಾತು, ಇನ್ನೊಂದು ಮುಖ್ಯಮಂತ್ರಿ ಚೇರ್ ಜಾಹೀರಾತು. ಇವರೆಡೇ ಪ್ರಮುಖವಾಗಿ ಓಡುತ್ತಿದೆ. ರೈತರ ಕಡೆ ಗಮನ ಇಲ್ಲ. ಮೆಕ್ಕೆಜೋಳ, ಬಿಳಿ ಜೋಳ ಖರೀದಿ ಕೇಂದ್ರ ತೆರೆದಿಲ್ಲ. ಗ್ಯಾರಂಟಿ ಹಾಗೂ ಚೇರ್ ಮಾತ್ರ ಸರ್ಕಾರದಲ್ಲಿ ಪ್ರಮುಖವಾಗಿದೆ ನಡೆಯುತ್ತಿದೆ‘ ಎಂದು ಟೀಕಿಸಿದರು.
ರಾಯರ ದರ್ಶನ:
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಭಾನುವಾರ ರಾತ್ರಿ ಮಂತ್ರಾಲಯಕ್ಕೆ ಆಗಮಿಸಿ ಗುರು ವೈಭವೋತ್ಸವದಲ್ಲಿ ಪಾಲ್ಗೊಂಡು. ರಾಯರ ದರ್ಶನ ಪಡೆದರು.
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಕುಮಾರಸ್ವಾಮಿ ದಂಪತಿಯನ್ನು ಸನ್ಮಾನಿಸಿದರು.
ಶ್ರೀ ರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಮಂತ್ರಾಲಯದ ಶ್ರೀ ಯೋಗೀಂದ್ರ ಸಭಾ ಭವನದಲ್ಲಿ ಭಾನುವಾರ ರಾತ್ರಿ ನಡೆದ ಶ್ರೀ ರಾಘವೇಂದ್ರ ಗುರುವೈಭವೋತ್ಸವದ ಕಾರ್ಯಕ್ರಮದಲ್ಲಿ ಶ್ರೀ ಸುಬುಧೇಂದ್ರ ತೀರ್ಥರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.