
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ರಾಜಕೀಯವಾಗಿ ಅತಂತ್ರವಾದಾಗ ಆಶ್ರಯ ನೀಡಿದ್ದ ಕಾಂಗ್ರೆಸ್ ಹಿರಿಯರನ್ನೇ ಮೂಲೆಗುಂಪು ಮಾಡಿ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದ ಸಿದ್ದರಾಮಯ್ಯ, ಈಗ ಮುಖ್ಯಮಂತ್ರಿ ಕುರ್ಚಿ ಬಿಡುವುದಿಲ್ಲ ಎನ್ನುವುದನ್ನು ಹೇಳಲು ಜಾತಿಯ ಅಸ್ತ್ರ ಬಳಸಿರಬಹುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
‘ಕುರಿ ಕಾಯುತ್ತಿದ್ದವನು ಮುಖ್ಯಮಂತ್ರಿ ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಲು ಕಾರಣ. ನನ್ನ ಮೇಲೆ ವಿರೋಧಿಗಳು ನಡೆಸುತ್ತಿರುವ ಬಹುತೇಕ ದಾಳಿಗಳು, ಮಾಡುತ್ತಿರುವ ಟೀಕೆ-ಆರೋಪಗಳಿಗೆ ನಾನು ಹುಟ್ಟಿದ ಜಾತಿಯೂ ಒಂದು ಕಾರಣ’ ಎಂಬ ಬರಹವನ್ನು ಸಿದ್ದರಾಮಯ್ಯ ಅವರು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಕುರಿತು ಅವರು ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಅವರು ಸಮಾಜಕ್ಕಾಗಿ ಅಥವಾ ಅವರೇ ಹೇಳುವ ‘ಅಹಿಂದ’ ಉದ್ದಾರಕ್ಕಾಗಿ ಮುಖ್ಯಮಂತ್ರಿಯಾಗಿಲ್ಲ. ಅವರಿಗೆ ಬೇಕಿರುವುದು ಕುರ್ಚಿ ಅಷ್ಟೆ. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಬರಲು ಕುರುಬರಷ್ಟೇ ಕಾರಣ ಅಲ್ಲ, ಇತರೆ ಜಾತಿಗಳ ಸಹಕಾರವೂ ಇದೆ. ಒಂದೇ ಜಾತಿ ಹೆಸರಿನಲ್ಲಿ ರಾಜಕೀಯ ಮಾಡಲು ಆಗದು. ಈಗಾಗಲೇ ಎಂಟು ವರ್ಷ ಮುಖ್ಯಮಂತ್ರಿ ಆಗಿದ್ದಾರೆ. ದಾಖಲೆಯ ಬಜೆಟ್ ಮಂಡಿಸಿದ್ದಾರೆ. ಈಗ ಅಧಿಕಾರಕ್ಕೆ ಅಂಟಿಕೊಳ್ಳಲು ತಮ್ಮ ಜಾತಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
‘ಮುಖ್ಯಮಂತ್ರಿ ಸ್ಥಾನದಿಂದ ತಮ್ಮನ್ನು ಕೆಳಗೆ ಇಳಿಸಲು ಹೊರಟಿರುವವರ ಕುರಿತು ಸಿದ್ದರಾಮಯ್ಯ ಅವರು ಅಂತಹ ಪೋಸ್ಟ್ ಮಾಡಿರಬಹುದು’ ಎಂದು ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.