ADVERTISEMENT

ಕಬ್ಬು ಸಮಸ್ಯೆ: ಗೌಡರ ಸಲಹೆ ಪಡೆದ ಕುಮಾರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:30 IST
Last Updated 21 ನವೆಂಬರ್ 2018, 20:30 IST

ಬೆಂಗಳೂರು: ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಮಧ್ಯದ ಸಂಘರ್ಷವನ್ನು ತಿಳಿಗೊಳಿಸುವ ಕುರಿತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ತಮ್ಮ ತಂದೆ ಎಚ್.ಡಿ. ದೇವೇಗೌಡ ಅವರ ಸಲಹೆ ಪಡೆದಿದ್ದಾರೆ.

ಪದ್ಮನಾಭನಗರದಲ್ಲರುವ ದೇವೇಗೌಡರ ನಿವಾಸಕ್ಕೆ ಬುಧವಾರ ರಾತ್ರಿ ಭೇಟಿ ನೀಡಿದ ಮುಖ್ಯಮಂತ್ರಿ, ಎರಡು ತಾಸು ಚರ್ಚೆ ನಡೆಸಿದರು.

ಬೆಳಗಾವಿಯಲ್ಲಿ ನಡೆಯುವ ಪ್ರತಿ ಅಧಿವೇಶನದಲ್ಲೂ ಸರ್ಕಾರಕ್ಕೆ ತಲೆನೋವು ತರುವ ಕಬ್ಬು ಬೆಳೆಗಾರರ ಸಮಸ್ಯೆ, ಈ ಬಾರಿಯೂ ಪ್ರತಿಧ್ವನಿಸುವ ಸಾಧ್ಯತೆ ಇದೆ. ಈಗಲೇ ಇದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಅಧಿವೇಶನ ನಿಭಾಯಿಸುವುದು ಕಷ್ಟವಾಗಲಿದೆ. ಇದನ್ನು ಬಗೆಹರಿಸುವುದು ಹೇಗೆ ಎಂಬ ಬಗ್ಗೆ ದೇವೇಗೌಡರ ಸಲಹೆ ಪಡೆದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಸರ್ಕಾರದ ಮುಂದಿರುವ ಸದ್ಯದ ಸವಾಲುಗಳ ಬಗ್ಗೆಯೂ ಚರ್ಚೆ ನಡೆಯಿತು. ಸಂಪುಟ ವಿಸ್ತರಣೆ, ಬರಗಾಲದ ನಿರ್ವಹಣೆ, ಬಡ್ತಿ ಮೀಸಲಾತಿ ಪರಿಷ್ಕೃತ ಕಾಯ್ದೆ ಅನುಷ್ಠಾನದ ಕುರಿತು ಮುಖ್ಯಮಂತ್ರಿ ಮಾರ್ಗದರ್ಶನ ಪಡೆದರು ಎಂದು ಮೂಲಗಳು ಹೇಳಿವೆ.

ಸಾಲಮನ್ನಾ ವಿಷಯದಲ್ಲಿ ಆಗಿರುವ ಬೆಳವಣಿಗೆ ಹಾಗೂ ಅನುಷ್ಠಾನಕ್ಕೆ ಇರುವ ತೊಡಕುಗಳ ಬಗ್ಗೆ ವಿವರಿಸಿದ ಕುಮಾರಸ್ವಾಮಿ, ಬಡವರ ಬಂಧು, ಇಸ್ರೇಲ್ ಮಾದರಿ ಕೃಷಿ ಸೇರಿದಂತೆ ಸರ್ಕಾರದ ನೂತನ ಯೋಜನೆಗಳ ಬಗ್ಗೆಯೂ ಗೌಡರಿಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.