ADVERTISEMENT

ಮಣ್ಣಿನ ಹೆಸರಿನಲ್ಲಿ ಕಬ್ಬಿಣದ ಅದಿರು ಸಾಗಿಸಿದ್ದ ಡಿಕೆಶಿ: ಎಚ್‌ಡಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 9:16 IST
Last Updated 5 ಏಪ್ರಿಲ್ 2025, 9:16 IST
ಡಿಕೆಶಿ , ಎಚ್‌ಡಿಕೆ
ಡಿಕೆಶಿ , ಎಚ್‌ಡಿಕೆ   

ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 2003–04ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾಗ ಮಣ್ಣಿನ ಹೆಸರಿನಲ್ಲಿ ಸಾವಿರಾರು ಟನ್‌ ಕಬ್ಬಿಣದ ಅದಿರನ್ನು ಬಳ್ಳಾರಿಯಿಂದ ತರಿಸಿಕೊಂಡಿದ್ದಾರೆ’ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನನ್ನನ್ನು ಪದೇ–ಪದೇ ಕೆಣಕುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶಿವಕುಮಾರ್‌, ‘ಕನಕಪುರದಲ್ಲಿ ಮಾತ್ರ ಬಂಡೆ ಒಡೆದಿದ್ದೇನೆ. ಬಳ್ಳಾರಿಗೆ ನನಗೂ ಏನು ಸಂಬಂಧ’ ಎಂದಿದ್ದಾರೆ. ಅವರಿಗೂ ಬಳ್ಳಾರಿಗೂ ಸಂಬಂಧ ಇಲ್ಲವೇ? ಅವರು ಸಚಿವರಾಗಿದ್ದಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಾಜ್ಯ ಖನಿಜ ಅಭಿವೃದ್ಧಿ ನಿಗಮಕ್ಕೆ ಹತ್ತಾರು ಪತ್ರಗಳನ್ನು ಏಕೆ ಬರೆದಿದ್ದರು’ ಎಂದು ಪ್ರಶ್ನಿಸಿದರು.

ADVERTISEMENT

‘ಶಿವಕುಮಾರ್‌ ತಮ್ಮ ಒಡೆತನದ ಏಳು ಕಂಪನಿಗಳ ಮೂಲಕ ಮಣ್ಣಿನ ಹೆಸರಿನಲ್ಲಿ ಉತ್ಕೃಷ್ಟ ಗುಣಮಟ್ಟದ ಕಬ್ಬಿಣದ ಅದಿರು ತರಿಸಿಕೊಂಡಿದ್ದಾರೆ. ಬಳ್ಳಾರಿಯಿಂದ ಎಷ್ಟು ಅದಿರು ಬಂತು, ಅದು ಎಲ್ಲಿಗೆ ಹೋಯಿತು, ರಸ್ತೆ ಮತ್ತು ನಿರ್ಮಾಣ ಕಾಮಗಾರಿಗೆ ಮಣ್ಣು ಎಲ್ಲಿಂದ ಬಂತು ಎಂಬೆಲ್ಲಾ ದಾಖಲೆ ನನ್ನ ಬಳಿ ಇದೆ. ನನ್ನನ್ನು ಕೆಣಕಿದ್ದೀರಿ. ಈ ಎಲ್ಲವನ್ನೂ ಬಯಲಿಗೆಳೆಯುತ್ತೇನೆ’ ಎಂದರು.

‘ನಿಮ್ಮ ಕಸ ಎತ್ತುತ್ತೇನೆ

 ‘ಕುಮಾರಸ್ವಾಮಿಯೂ ಕಸ ಎತ್ತುತ್ತಿದ್ದ ಎಂದು ಶಿವಕುಮಾರ್ ಹೇಳಿದ್ದಾರೆ. ಹೌದು ನಾನು ಬಿಎಸ್‌ಸಿ ಓದುವಾಗ ಹೊಂಬೇಗೌಡನಗರ, ವಿಲ್ಸನ್‌ಗಾರ್ಡನ್‌ ಮತ್ತು ಸುಧಾಮನಗರ ವಾರ್ಡ್‌ಗಳಲ್ಲಿ ಕಸ ಎತ್ತುವ ಗುತ್ತಿಗೆ ಪಡೆದಿದ್ದೆ. ಆ ಬಗ್ಗೆ ಮಾತನಾಡಿದ್ದಕ್ಕೆ ಬೇಸರವಿಲ್ಲ. ಈಗ ನಿಮ್ಮ ಕಸ ಎತ್ತುವ ಟೆಂಡರ್‌ ತೆಗೆದುಕೊಂಡಿದ್ದೇನೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಬಿಬಿಎಂಪಿಯಲ್ಲಿ ಕಸ ಎತ್ತಲು 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಶಿವಕುಮಾರ್‌ ಹೊರಟಿದ್ದರು. ಪ್ರತಿ ಟನ್‌ ಕಸ ವಿಲೇವಾರಿಗೆ ₹6,000 ಶುಲ್ಕ ನಿಗದಿ ಮಾಡಿದ್ದರು. ಅದರಲ್ಲಿ ₹15,000 ಕೋಟಿಯಷ್ಟು ಅಕ್ರಮವಾಗುತ್ತಿದೆ ಎಂದು ನಾನು ಆಕ್ಷೇಪ ಎತ್ತಿದ ನಂತರ ಟೆಂಡರ್‌ ಬದಲಿಸಿದ್ದಾರೆ. ಈಗ ಪ್ರತಿ ಟನ್‌ಗೆ ₹3,000 ನಿಗದಿ ಮಾಡಿದ್ದಾರೆ. ಅಕ್ರಮ ಇಲ್ಲ ಎಂದಾದ ಮೇಲೆ ಟೆಂಡರ್‌ ಬದಲಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.

ಪೊಲೀಸರ ಅಧಿಕಾರವೇನು?

‘ಕೇತಗಾನಹಳ್ಳಿ ತೋಟದ ಪ್ರಕರಣದಲ್ಲಿ ನಮ್ಮ ಪಕ್ಕದ ತೋಟದ ಚಂದ್ರಶೇಖರಯ್ಯ ಎಂಬ ವೈದ್ಯರ ಜಮೀನಿಗೆ ಸಂಬಂಧಿಸಿದಂತೆ ರಾಮನಗರ ಪೊಲೀಸರು ನೋಟಿಸ್‌ ನೀಡಿದ್ದಾರೆ. ದಾಖಲೆ ಪತ್ರಗಳೊಂದಿಗೆ ಬಂದು, ವಿಚಾರಣೆ ಎದುರಿಸಿ ಎಂದಿದ್ದಾರೆ. ಕಂದಾಯ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರವನ್ನು ಪೊಲೀಸರಿಗೆ ಕೊಟ್ಟವರು ಯಾರು’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಯುದ್ಧಕ್ಕೆ ಬಂದಿದ್ದೇನೆ’

‘ರಾಜ್ಯದಲ್ಲೀಗ ಒಬ್ಬ ಘಜ್ನಿ ಒಬ್ಬ ಘೋರಿ ಮತ್ತೊಬ್ಬ ಮಲ್ಲಿಖಾಫರ್‌ ಕೂತು ಲೂಟಿ ಹೊಡೆಯುತ್ತಿದ್ದಾರೆ. ವಾರಕ್ಕೊಂದರಂತೆ ಇವರ ಹಗರಣಗಳನ್ನು ಬಿಚ್ಚಿಡುತ್ತೇನೆ. ಇವರ ವಿರುದ್ಧ ಯುದ್ಧ ಸಾರಿದ್ದೇನೆ’ ಎಂದ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಅವುಗಳು ಇಂತಿವೆ:

* ನನ್ನ ವಿರುದ್ಧದ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು 17 ವರ್ಷಗಳಿಂದ ತನಿಖೆ ನಡೆಸುತ್ತಲೇ ಇದ್ದಾರೆ. ಮುಡಾ ಪ್ರಕರಣದಲ್ಲಿ ಕೆಲವೇ ತಿಂಗಳಲ್ಲಿ ತನಿಖೆ ನಡೆಸಿ ಬಿ–ರಿಪೋರ್ಟ್‌ ಸಲ್ಲಿಸಿದ್ದಾರೆ. ಇದು ಯಾವ ರೀತಿಯ ತನಿಖೆ?

* ‘ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನಸ್ವಾಮಿಯೇ ದೇವರಾಜು ಹೆಸರಿನಲ್ಲಿ ಡಿನೋಟಿಫಿಕೇಶನ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯ ಮೇಲೆ ಡಿಸಿಎಂ ಎಂದು ಬರೆಯಲಾಗಿದೆ. ಅರ್ಜಿಯ ಕೈಬರಹ ಡಿಸಿಎಂ ಎಂಬ ಕೈಬರಹ ತಾಳೆಯಾಗುತ್ತದೆಯೇ’ ಎಂಬ ಅಂಶ ಲೋಕಾಯುಕ್ತದ ಬಿ–ರಿಪೋರ್ಟ್‌ನಲ್ಲಿ ಇದೆ. ಈ ಆಯಾಮದಲ್ಲಿ ತನಿಖೆ ಏಕೆ ಮುಂದುವರೆಯಲಿಲ್ಲ?

* ಸರ್ಕಾರಿ ಗುತ್ತಿಗೆಯಲ್ಲಿ ಸಾಬರಿಗೆ ಶೇ4ರಷ್ಟು ಮೀಸಲಾತಿ ನೀಡಲು ಹೊರಟಿದ್ದೀರಿ. ದಲಿತರಿಗೆ ಈ ಹಿಂದೆಯೇ ಮೀಸಲಾತಿ ನೀಡಿದ್ದೀರಿ. ಆ ಮೀಸಲಾತಿಯಂತೆ ಎಷ್ಟು ಮಂದಿ ದಲಿತರಿಗೆ ಗುತ್ತಿಗೆ ಸಿಕ್ಕಿದೆ? ಸಿದ್ದರಾಮಯ್ಯನವರೇ ಈ ಬಗ್ಗೆ ಶ್ವೇತಪತ್ರ ಹೊರಡಿಸಲು ಸಿದ್ದರಿದ್ದೀರಾ?

* ದೇವೇಗೌಡ ಪ್ರಧಾನಿಯಾದ ಮೇಲೆ ಮತ್ತು ರೇವಣ್ಣ ಅಧ್ಯಕ್ಷರಾದ ಕೆಎಂಎಫ್‌ ಅನ್ನು ಹೇಗೆ ಲಾಭಕ್ಕೆ ತಂದರು ಎಂಬುದು ನನಗೆ ಗೊತ್ತಿದೆ. ಆ ಬಗ್ಗೆ ಶಿವಕುಮಾರ್ ಅವರಿಂದ ನಾನು ಹೇಳಿಸಿಕೊಳ್ಳಬೇಕಿಲ್ಲ. ನೀವು ಮೊಸರಿನ ಬೆಲೆ ₹4 ಹೆಚ್ಚಿಸಿದ್ದೀರಲ್ಲಾ ಅದು ಎಲ್ಲಿಗೆ ಹೋಗುತ್ತದೆ ಎಂಬುದನ್ನು ತಿಳಿಸುತ್ತೀರಾ?

2012ರಲ್ಲಿ ಯಡಿಯೂರಪ್ಪ ವಿರುದ್ಧ ದಾಖಲೆ ಬಿಡುಗಡೆ ಮಾಡಿದ್ದೆ ಎಂದು ನನ್ನ ವಿರುದ್ಧ ನಾಲ್ಕು ಪ್ರಕರಣ ದಾಖಲಿಸಿದ್ದರು. ಈಗ ಕಾಂಗ್ರೆಸ್‌ ಸರ್ಕಾರ ಸಹ ಅದನ್ನೇ ಮಾಡುತ್ತಿದೆ
ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.