ADVERTISEMENT

ಪುಟ್ಟಣ್ಣ ಕುಟುಂಬದವರಿಗೆ ಉದ್ಯೋಗ ಕೊಡಿಸಿದ್ದಾಗಿ ಹೇಳಿಲ್ಲ: ಎಚ್‌ಡಿಕೆ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 3:35 IST
Last Updated 24 ಅಕ್ಟೋಬರ್ 2020, 3:35 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಬೆಂಗಳೂರು: ‘ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿರುವ ಪುಟ್ಟಣ್ಣ ಕುಟುಂಬದ 10–12 ಜನರಿಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿಯಲ್ಲಿ ಕ್ಲಾಸ್ ಒನ್‌ ಉದ್ಯೋಗ ಕೊಡಿಸಿದ್ದೆ ಎಂದು ನಾನು ಹೇಳಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

‘ಕೇತಗಾನಹಳ್ಳಿ ತೋಟದ ಮನೆಯಲ್ಲಿ ಶಿಕ್ಷಕರೊಂದಿಗೆ ನಡೆದ ಸಭೆಯಲ್ಲಿ, ಪುಟ್ಟಣ್ಣ ಕುಟುಂಬದ 10–12 ಜನಕ್ಕೆ ಕ್ಲಾಸ್ ಒನ್ ಹುದ್ದೆ ಕೊಡಿಸಿದ್ದೇನೆ. 1999-2000 ರಲ್ಲಿ ನನ್ನ ಅಧಿಕಾರ ಅವಧಿಯಲ್ಲಿ ಉಪನ್ಯಾಸಕರ ನೇಮಕಾತಿ ನಡೆದಿತ್ತು. ಆಗ ಎಚ್‌.ಎನ್‌. ಕೃಷ್ಣ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದರು. ಆದರೆ ಈ (ಪುಟ್ಟಣ್ಣ) ವ್ಯಕ್ತಿ ಅವರಿವರ ಅರ್ಜಿ ಹಿಡಿದುಕೊಂಡು ಬಂದು, ನೂರಾರು ಮಂದಿಗೆ ಉದ್ಯೋಗ ಕೊಡಿಸಿಕೊಂಡಿದ್ದಾರೆ’ ಎಂದು ನಾನು ಹೇಳಿದ್ದಾಗಿ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿದೆ. ಈ ರೀತಿಯ ಹೇಳಿಕೆಯನ್ನು ನಾನು ನೀಡಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘1999ರಲ್ಲಿ ನಾನು ಮುಖ್ಯಮಂತ್ರಿ ಆಗಿರಲಿಲ್ಲ. ಆಗ ಎಸ್. ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದರು. ಅವರ ಅವಧಿಯಲ್ಲಿ ಎಚ್.ಎನ್‌. ಕೃಷ್ಣ ಕೆಪಿಎಸ್‌ಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಹೀಗಾಗಿ ನೇಮಕಾತಿಯಲ್ಲಿ ನಾನು ಮಧ್ಯ ಪ್ರವೇಶ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾನು ಹೇಳದೇ ಇರುವುದು ಸುದ್ದಿಯಾಗಿರುವುದರಿಂದಾಗಿ ಸಮಾಜಕ್ಕೆ ತಪ್ಪು ಸಂದೇಶ ಹೋದಂತಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.