ನವದೆಹಲಿ: ಮಳೆಯ ಕೊರತೆ ಮತ್ತು ಬೆಳೆ ಹಾನಿಯಿಂದಾಗಿ ತೀವ್ರ ಸಂಕಷ್ಟದಲ್ಲಿರುವ ರಾಜ್ಯದ 16 ಜಿಲ್ಲೆಗಳ ಅಡಿಕೆ ಬೆಳೆಗಾರರ ಸಮಸ್ಯೆ ನಿವಾರಿಸಲು ಮುಂದಾಗಬೇಕು ಎಂದು ದಕ್ಷಿಣ ಕನ್ನಡದ ಬಿಜೆಪಿ ಸಂಸದ ನಳಿನ್ಕುಮಾರ್ ಕಟೀಲ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಲೋಕಸಭೆಯಲ್ಲಿ ಬುಧವಾರ ಶೂನ್ಯವೇಳೆಯಲ್ಲಿ ಕನ್ನಡದಲ್ಲೇ ಈ ವಿಷಯ ಪ್ರಸ್ತಾಪಿಸಿದ ಅವರು, ಕೊಳೆ ರೋಗ, ಹಳದಿ ರೋಗದಿಂದಾಗಿ ಅಡಿಕೆ ಮರಗಳು ಒಣಗಿವೆ. ಈ ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಮಾದರಿಯ ಕೀಟನಾಶಕ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ದೇಶದಾದ್ಯಂತ ಮಂಗಳಕಾರ್ಯ ಹಾಗೂ ಬಣ್ಣ ತಯಾರಿಕೆಗೂ ಬಳಕೆಯಾಗುವ ಅಡಿಕೆಗೆ ಸಾಕಷ್ಟು ಬೇಡಿಕೆ ಇದೆ. ಆದರೂ ಸೂಕ್ತ ರೀತಿಯ ದರ ದೊರೆಯುತ್ತಿಲ್ಲ. ನೆರೆಯ ಬಾಂಗ್ಲಾದೇಶ ಮತ್ತಿತರ ರಾಷ್ಟ್ರಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದೇ ದರ ಕಡಿಮೆಯಾಗಲು ಕಾರಣವಾಗಿದೆ ಎಂದು ಅವರು ದೂರಿದರು.
ತೆರಿಗೆ ಇಲ್ಲದೆ ಅಕ್ರಮವಾಗಿ ಬರುತ್ತಿರುವ ವಿದೇಶಿ ಅಡಿಕೆಯ ಆಮದನ್ನು ನಿಯಂತ್ರಿಸುವ ಮೂಲಕ ಕೇಂದ್ರ ಸರ್ಕಾರವು ಸ್ಥಳೀಯ ಬೆಳೆಗಾರರಿಗೆ ಅನುಕೂಲ ಕಲ್ಪಿಸಬೇಕು. ಅನಾವೃಷ್ಟಿಯಿಂದ ಎದುರಾಗಿರುವ ನಷ್ಟಕ್ಕೆ ಪರಿಹಾರವನ್ನೂ ಬಿಡುಗಡೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.