ಬೆಂಗಳೂರು: ಕೇಂದ್ರ ಸರ್ಕಾರಿ ಒಡೆತನದ ’ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‘ (ಬಿಇಎಂಎಲ್) ಕಂಪನಿಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಬೇಕು ಎಂಬ ಮನವಿಯನ್ನುಹೈಕೋರ್ಟ್ ತಳ್ಳಿಹಾಕಿದೆ.
ಈ ಸಂಬಂಧ ಬಿಇಎಂಎಲ್ಕಾರ್ಮಿಕರಸಂಘದ ಪ್ರಧಾನ ಕಾರ್ಯದರ್ಶಿ ಎನ್. ರುದ್ರಯ್ಯ ಸೇರಿದಂತೆ ನಾಲ್ವರು ಪದಾಧಿಕಾರಿಗಳುಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ.ರವಿವರ್ವ ಕುಮಾರ್, ’ಖಾಸಗೀಕರಣ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಬೇಕು ಅಥವಾ ಯಥಾಸ್ಥಿತಿಕಾಯ್ದುಕೊಳ್ಳಲು ಮಧ್ಯಂತರ ಆದೇಶ ಹೊರಡಿಸಬೇಕು‘ ಎಂದು ಮನವಿ ಮಾಡಿದರು.
ಇದನ್ನು ನಿರಾಕರಿಸಿದ ನ್ಯಾಯಪೀಠ,ಕೇಂದ್ರ ಹಣಕಾಸು ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮತ್ತು ಬಿಇಎಂಎಲ್ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಫೆಬ್ರುವರಿ 10ಕ್ಕೆ ಮುಂದೂಡಿತು.
ಆಕ್ಷೇಪವೇನು?:ಕೇಂದ್ರ ಸರ್ಕಾರವು ಬಿಇಎಂಎಲ್ ಸೇರಿದಂತೆ ತನ್ನ ಒಡೆತನದಲ್ಲಿರುವ ಆರು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಕೈಗೆತ್ತಿಕೊಂಡಿದೆ. ’ಮಿನಿರತ್ನ‘ ಎಂದೇ ಪರಿಗಣಿಸಲಾಗಿರುವ ಬೆಮೆಲ್ ಸಂಸ್ಥೆ ರಕ್ಷಣಾ ವಲಯದ ಅತ್ಯಂತ ಪ್ರಮುಖ ಉದ್ದಿಮೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಸಕ್ತಿ ವ್ಯಕ್ತಪಡಿಸುವಿಕೆಗೂ (ಎಕ್ಸ್ಪ್ರೆಷನ್ ಆಫ್ ಇಂಟ್ರಸ್ಟ್) ಅವಕಾಶ ನೀಡಲಾಗಿದೆ. ಖಾಸಗೀಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುತ್ತಿಲ್ಲ. ಆರ್ಟಿಐನಲ್ಲಿಯೂ ಮಾಹಿತಿ ನೀಡುತ್ತಿಲ್ಲ‘ ಎಂಬುದು ಅರ್ಜಿದಾರರ ಆಕ್ಷೇಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.