ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಎಸ್ಸಿ-ಎಸ್ಟಿ) ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಹಲವು ಆರೋಪಗಳಡಿ ಸುಳ್ಳು ದೂರು ದಾಖಲಿಸಿದ್ದ ಶಿಕ್ಷಕರೊಬ್ಬರಿಂದ ₹ 1.5 ಲಕ್ಷ ವಸೂಲಿ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ಮರಡಿ ಮಲ್ಲೇಶ್ವರ ಹೈಸ್ಕೂಲ್ ಮುಖ್ಯ ಶಿಕ್ಷಕ ಶಿವಲಿಂಗಪ್ಪ ಬಿ. ಕೆರಕಲ ಮಟ್ಟಿ ವಿರುದ್ಧದ ಪ್ರಕರಣಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ರದ್ದುಗೊಳಿಸಿದೆ.
"ಅರ್ಜಿದಾರ ಶಿವಲಿಂಗಪ್ಪ ಬಿ.ಕೆರಕಲಮಟ್ಟಿ ವಿರುದ್ಧ ಶಿಕ್ಷಕ ಚಂದ್ರು ರಾಥೋಡ್ ಕ್ರಿಮಿನಲ್ ದೂರು ದಾಖಲಿಸಿರುವುದು, ನಂತರ ಸಮಾಜ ಕಲ್ಯಾಣ ಇಲಾಖೆಯಿಂದ ಆರ್ಥಿಕ ನೆರವು ಪಡೆದಿರುವುದು ಸಾಬೀತಾಗಿದೆ. ಆದರೆ, ಅವರ ಈ ದೂರುಗಳು ನಕಲಿಯಾಗಿದ್ದು, ಸುಳ್ಳಿನಿಂದ ಮತ್ತು ದುರುದ್ದೇಶದಿಂದ ಕೂಡಿವೆ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ತೆರಿಗೆ ಹಣದಿಂದ ಪಡೆದಿರುವ ₹ 1.5 ಲಕ್ಷ ವಾಪಸು ಪಡೆಯಬೇಕು" ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.
ಪ್ರಕರಣವೇನು?: ಚಂದ್ರು ರಾಥೋಡ್ 1988ರ ಡಿಸೆಂಬರ್ 12ರಂದು ಶಿಕ್ಷಕರಾಗಿ ಸೇವೆಗೆ ಸೇರಿದ್ದರು. ದುರ್ನಡತೆ ಹಿನ್ನೆಲೆಯಲ್ಲಿ 2012ರಲ್ಲಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಈ ಕುರಿತಂತೆ ರಾಥೋಡ್ ನ್ಯಾಯಾಂಗ ಹೋರಾಟ ನಡೆಸಿ ಯಶಸ್ವಿಯಾಗಿದ್ದರು. ಇದರನ್ವಯ, "ರಾಥೋಡ್ ಅವರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಬೇಕು. ಹಿಂಬಾಕಿ ನೀಡಬೇಕು" ಎಂದು ಹೈಕೋರ್ಟ್ 2020ರಲ್ಲಿ ಸರ್ಕಾರಕ್ಕೆ ಆದೇಶಿಸಿತ್ತು.
ಏತನ್ಮಧ್ಯೆ ಚಂದ್ರು ರಾಥೋಡ್, "ಮುಖ್ಯ ಶಿಕ್ಷಕರು ನನ್ನನ್ನು ಪುನಃ ಸೇವೆಗೆ ಸೇರಿಸಿಕೊಳ್ಳಲು ₹ 10.50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ನನ್ನ ಮೆಲೆ ದೌರ್ಜನ್ಯ ಎಸಗಿದ್ದಾರೆ" ಎಂದು ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಒಟ್ಟು ಮೂರು ದೂರು ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಶಿವಲಿಂಗಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.