ಬೆಂಗಳೂರು: ಭೂ ಸುಧಾರಣೆ (ತಿದ್ದುಪಡಿ) ಕಾಯ್ದೆ, ಎಪಿಎಂಸಿ (ತಿದ್ದುಪಡಿ) ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರವೂ ಹಿಂಪಡೆಯಬೇಕು ಎಂದು ಆಗ್ರಹಿಸಿ ‘ಸಂಯುಕ್ತ ಹೋರಾಟ ಕರ್ನಾಟಕ’ವು ರಾಜ್ಯದ ವಿವಿಧ ಕಡೆಗಳಲ್ಲಿ ಇದೇ 26ರಂದು ಹೆದ್ದಾರಿ ಬಂದ್ ಚಳವಳಿ ಹಮ್ಮಿಕೊಂಡಿದೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸಂಯೋಜಕ ಜಿ.ಸಿ.ಬಯ್ಯಾರೆಡ್ಡಿ, ‘ಮೂರುಕರಾಳ ಕೃಷಿ ಕಾಯ್ದೆಗಳನ್ನು ಮೋದಿ ಸರ್ಕಾರ ಹಿಂಪಡೆದಿರುವುದು ರೈತರ ಚಳವಳಿಗೆ ಸಿಕ್ಕಿರುವ ಗೆಲುವು. ಅದರಂತೆ ರಾಜ್ಯದ ಕೆಲವು ಕಾಯ್ದೆಗಳು ಹಾಗೂ ತಿದ್ದುಪಡಿ ಕಾಯದೆಗಳು ಕೃಷಿಕರಿಗೆ ಮಾರಕವಾಗಿದ್ದು, ಅವುಗಳನ್ನೂ ರಾಜ್ಯ ಸರ್ಕಾರ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.
‘ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವುದು ಹಾಗೂ ಹಾಲಿನ ದರ ಪರಿಷ್ಕರಣೆ ಕುರಿತಾಗಿ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇರೈತ ಸಂಘಟನೆಗಳ ಸಭೆ ಕರೆಯಬೇಕು’ ಎಂದು ಒತ್ತಾಯಿಸಿದರು.
‘ಬೆಂಗಳೂರು–ಹೈದರಾಬಾದ್ ಹೆದ್ದಾರಿ ಮಾರ್ಗದಲ್ಲಿ ಚಿಕ್ಕಬಳ್ಳಾಪುರದ ಚದಲಪುರ , ಬೆಂಗಳೂರು–ಮೈಸೂರು ಹೆದ್ದಾರಿಯ ಶ್ರೀರಂಗಪಟ್ಟಣ, ಬೆಂಗಳೂರು–ಪುಣೆ ಹೆದ್ದಾರಿಯ ತುಮಕೂರು ಟೋಲ್ಗೇಟ್, ಸುರಪುರ–ಶಹಾಪುರ ನಡುವಿನ ದೇವದುರ್ಗ ಕ್ರಾಸ್, ಹೊಸಪೇಟೆ ಜಂಕ್ಷನ್, ಸೇರಿದಂತೆ ವಿವಿಧ ಹೆದ್ದಾರಿಗಳಲ್ಲಿ ರೈತರು ಹಾಗೂ ಕಾರ್ಮಿಕರು ಜಾನುವಾರು, ಟ್ರ್ಯಾಕ್ಟರ್ ಇತ್ಯಾದಿಗಳೊಂದಿಗೆ ಹೆದ್ದಾರಿ ಬಂದ್ ಮಾಡಲಿದ್ದಾರೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.