
ಪ್ರೊ.ಬಿ.ಆರ್. ಶೇಷಾದ್ರಿ ಅಯ್ಯಂಗಾರ್, ಎಚ್. ಜನಾರ್ದನ್, ಜಿ.ಎಂ. ಶಿವಪ್ರಸಾದ್
ಮೈಸೂರು: ರಂಗಕರ್ಮಿ ಎಚ್. ಜನಾರ್ದನ್(ಜನ್ನಿ) ಸೇರಿದಂತೆ ಮೂವರು ಸಾಧಕರನ್ನು ಇಲ್ಲಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ನೀಡಲಾಗುವ ಗೌರವ ಡಾಕ್ಟರೇಟ್ಗೆ ಆಯ್ಕೆ ಮಾಡಲಾಗಿದೆ.
ಸಂಗೀತ ಕ್ಷೇತ್ರದಿಂದ ಪ್ರೊ.ಬಿ.ಆರ್. ಶೇಷಾದ್ರಿ ಅಯ್ಯಂಗಾರ್ ಮತ್ತು ಜಾನಪದ ಸಂಗೀತ ಕ್ಷೇತ್ರದಿಂದ ಜಿ.ಎಂ. ಶಿವಪ್ರಸಾದ್ (ಗೊಲ್ಲಹಳ್ಳಿ ಶಿವಪ್ರಸಾದ್) ಅವರನ್ನು ಆಯ್ಕೆ ಮಾಡಲಾಗಿದೆ. ನಗರದ ಲಕ್ಷ್ಮೀಪುರಂನಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ನ.8ರಂದು ಬೆಳಿಗ್ಗೆ 11.30ಕ್ಕೆ ನಡೆಯುವ 10ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು.
2024–25ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಡಿ.ಲಿಟ್ ಪದವಿ ಪ್ರದಾನ ನಡೆಯಲಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಪಾಲ್ಗೊಳ್ಳುವರು. ಕೇರಳದ ಕಲಾಮಂಡಲಂ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ. ಅನಂತಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
7 ಮಂದಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಗುವುದು. ಸ್ನಾತಕೋತ್ತರ ಪದವಿ (ಎಂಪಿಎ)ಯಲ್ಲಿ ಶ್ರವ್ಯಾ ಎ. ಭರತನಾಟ್ಯ ವಿಭಾಗದಲ್ಲಿ 6 ಚಿನ್ನದ ಪದಕ ಗಳಿಸಿದ್ದಾರೆ. ಲತಾ ವಿ. (ಕರ್ನಾಟಕ ಸಂಗೀತ ಗಾಯನ ವಿಭಾಗ) 5, ಡಿ.ಎನ್. ಇಂದ್ರಕುಮಾರ್ (ಹಿಂದೂಸ್ತಾನಿ ಸಂಗೀತ ಗಾಯನ ವಿಭಾಗ) 3, ಶ್ರೀಕಾಂತ್ ಎಸ್. ಹಾಗೂ ಸಿ.ನಂಜುಂಡಸ್ವಾಮಿ (ನಾಟಕ ವಿಭಾಗ) ತಲಾ ಒಂದು ಚಿನ್ನದ ಪದಕ ಪಡೆದಿದ್ದಾರೆ.
ಸ್ನಾತಕ ಪದವಿಯಲ್ಲಿ (ಬಿಪಿಎ) ಪಿ. ಪುನೀತಾ (ಕರ್ನಾಟಕ ಸಂಗೀತ ಗಾಯನ ವಿಭಾಗ) 4, ಸಂಜಯ್ ಎಂ. (ಹಿಂದೂಸ್ತಾನಿ ಸಂಗೀತ ಗಾಯನ ವಿಭಾಗ) 2 ಹಾಗೂ ಸುಜನಾ ಎಂ.ಬಿ. (ಭರತನಾಟ್ಯ ವಿಭಾಗ) ಒಂದು ಚಿನ್ನದ ಪದಕ ಗಳಿಸಿದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.