ADVERTISEMENT

ಕಾಶ್ಮೀರದ ಹೋಟೆಲ್‌ನಲ್ಲಿ ಸಿಲುಕಿದ್ದ ಹುಬ್ಬಳ್ಳಿ, ಹೊಸಪೇಟೆ ಪ್ರವಾಸಿಗರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 13:39 IST
Last Updated 13 ಮಾರ್ಚ್ 2021, 13:39 IST
ಸತತ ಹಿಮಪಾತದಿಂದಾಗಿ ಕಾಶ್ಮೀರದ ಹೋಟೆಲ್‌ನಲ್ಲಿ ಸಿಲುಕಿದ್ದ ಹುಬ್ಬಳ್ಳಿಯ ಎಂಟು ಹಾಗೂ ಹೊಸಪೇಟೆಯ ಇಬ್ಬರು ಪ್ರವಾಸಿಗರು
ಸತತ ಹಿಮಪಾತದಿಂದಾಗಿ ಕಾಶ್ಮೀರದ ಹೋಟೆಲ್‌ನಲ್ಲಿ ಸಿಲುಕಿದ್ದ ಹುಬ್ಬಳ್ಳಿಯ ಎಂಟು ಹಾಗೂ ಹೊಸಪೇಟೆಯ ಇಬ್ಬರು ಪ್ರವಾಸಿಗರು   

ಹುಬ್ಬಳ್ಳಿ: ಪ್ರವಾಸಕ್ಕೆಂದು ಕಾಶ್ಮೀರಕ್ಕೆ ತೆರಳಿದಾಗ ವಿಪರೀತ ಹಿಮಪಾತವಾಗಿ ಮೂರು ದಿನಗಳಿಂದ ಹೋಟೆಲ್‌ನಲ್ಲಿ ಸಿಲುಕಿದ್ದ ಹುಬ್ಬಳ್ಳಿಯ ಎಂಟು ಹಾಗೂ ಹೊಸಪೇಟೆಯ ಇಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದ್ದು, ಅವರು ಈಗ ಶ್ರೀನಗರಕ್ಕೆ ತೆರಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಸೋನ್‌ಮರ್ಗ್‌ನ ಖಾಸಗಿ ಹೋಟೆಲ್‌ನಲ್ಲಿ ಹತ್ತು ಜನ ಉಳಿದುಕೊಂಡಿದ್ದರು. ಹುಬ್ಬಳ್ಳಿಯ ಕೇಶ್ವಾಪುರದ ಅಂಬಿಕಾ ನಗರದ ವೆಂಕಟೇಶ ಜಲಭಂಜನ್‌ ಕುಟುಂಬದ ಎಂಟು ಜನ ಮತ್ತು ಹೊಸಪೇಟೆಯ ಪ್ರಕಾಶ ಹಾಗೂ ಸುಧಾ ಮೆಹರವಾಡೆ ದಂಪತಿ ಒಂಬತ್ತು ದಿನಗಳ ಹಿಂದೆ ಪ್ರವಾಸಕ್ಕೆ ತೆರಳಿದ್ದರು.

ಹೋಟೆಲ್‌ನಲ್ಲಿ ಸಿಲುಕಿಕೊಂಡಿದ್ದವರು

ಮೊದಲ ಐದು ದಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿದ್ದರು. ಎರಡ್ಮೂರು ದಿನಗಳಿಂದ ಹಿಮಪಾತ ಹೆಚ್ಚಾಗಿದ್ದರಿಂದ ಅವರಿಗೆ ಹೋಟೆಲ್‌ ಬಿಟ್ಟು ಹೊರಹೋಗಲು ಸಾಧ್ಯವಾಗಿರಲಿಲ್ಲ. ಮೂರು ದಿನಗಳಿಂದ ವಿದ್ಯುತ್‌ ಸಂಪರ್ಕ ಕಡಿತವಾಗಿತ್ತು ಎಂದು ಪ್ರವಾಸಿಗರು ತಿಳಿಸಿದರು.

ADVERTISEMENT

ಪ್ರಕಾಶ ಮೆಹರವಾಡೆ ‘ಪ್ರಜಾವಾಣಿ’ ಜೊತೆ ಮಾತನಾಡಿ ‘ನಾವು ಉಳಿದುಕೊಂಡಿದ್ದ ಹೋಟೆಲ್‌ ಸಂಪೂರ್ಣ ಹಿಮದಿಂದ ಆವೃತವಾಗಿತ್ತು. ಸತತ ಹಿಮಪಾತದಿಂದಾಗಿ ಹತ್ತು ಅಡಿಗಿಂತಲೂ ಹೆಚ್ಚು ಹಿಮ ಸಂಗ್ರಹವಾಗಿತ್ತು. ಹೋಟೆಲ್‌ನಿಂದ ಹೊರಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಹೊರಗಡೆ ಏನಾಗುತ್ತಿದೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಶನಿವಾರ ಸ್ಥಳೀಯ ಆಡಳಿತ ಮತ್ತು ಮಿಲಿಟರಿ ಸಿಬ್ಬಂದಿ ನಮ್ಮನ್ನು ಹೋಟೆಲ್‌ನಿಂದ ಹೊರಗೆ ಕರೆದೊಯ್ದರು’ ಎಂದರು.

ಹಿಮಪಾತದಲ್ಲಿ ಸಿಲುಕಿಕೊಂಡಿರುವ ಹೋಟೆಲ್ ದೃಶ್ಯ

ವೆಂಕಟೇಶ ಮಾತನಾಡಿ ‘ಕಾಶ್ಮೀರದಲ್ಲಿನ ಸುಂದರ ಪ್ರದೇಶಗಳನ್ನು ನೋಡಿಕೊಂಡು ಬರಬೇಕು ಎನ್ನುವ ಆಸೆಯಿಂದ ದಂಪತಿ ಸಮೇತ ಹೋಗಿದ್ದೆ. ಅಲ್ಲಿನ ಹಿಮಪಾತ ಹಾಗೂ ಚಳಿ ನೋಡಿ ಸುರಕ್ಷಿತವಾಗಿ ಊರು ತಲುಪಿದರೆ ಸಾಕು ಎನ್ನುವಂತಾಗಿತ್ತು. ದೇವರ ಕೃಪೆಯಿಂದ ಸುರಕ್ಷಿತವಾಗಿ ಅಪಾಯ ಸ್ಥಳದಿಂದ ಹೊರಬಂದೆವು’ ಎಂದು ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.