ಹುಬ್ಬಳ್ಳಿ/ಕಲಬುರ್ಗಿ: ಮತದಾರರ ಹೆಸರು ಕೈಬಿಟ್ಟಿದ್ದಕ್ಕೆ ಆಕ್ರೋಶ, ವಾಗ್ವಾದದ ನಡುವೆ ಶುಕ್ರವಾರ ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆಯ 82 ವಾರ್ಡ್ಗಳಲ್ಲಿ ಮತದಾನ ನಡೆಯಿತು. ಕಲಬುರ್ಗಿ ಮಹಾನಗರ ಪಾಲಿಕೆಯ 55 ವಾರ್ಡ್ಗಳಿಗೆ ಮತದಾನ ನಡೆದಿದ್ದು, ಅಲ್ಲಲ್ಲಿ ನಕಲಿ ಮತದಾನದ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿಯ ಗಣೇಶ ಪೇಟೆ, ಗಾರ್ಡನ್ ಪೇಟೆಯಲ್ಲಿ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದರು. ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದು, ಬೇರೆ ವಾರ್ಡ್ಗೆ ವರ್ಗಾವಣೆ ಕಾರಣ ಗೊಂದಲ ಉಂಟಾಯಿತು. ಒಟ್ಟಾರೆ ಶೇ 53.81ರಷ್ಟು ಮತದಾನವಾಗಿದೆ. ಮತದಾನ ನೀರಸವಾಗಿತ್ತು. ಒಟ್ಟು 420 ಅಭ್ಯರ್ಥಿಗಳು ಕಣದಲ್ಲಿದ್ದು ಸೆ.6ರಂದು ಮತ ಎಣಿಕೆ ನಡೆಯಲಿದೆ.
ಪೊಲೀಸ್ ಸಾವು: ಚುನಾವಣೆ ಕರ್ತವ್ಯ ನಿರತ ಸಿಬ್ಬಂದಿಗೆ ಊಟ ಒಯ್ಯುತ್ತಿದ್ದ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ಕಾನ್ಸ್ಟೆಬಲ್ ನಿಂಗಪ್ಪ ಭೂಸಣ್ಣವರ (28) ಬೈಕ್– ಟ್ರಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕಲಬುರ್ಗಿ ಪಾಲಿಕೆಯ 13ನೇ ವಾರ್ಡ್ನ ಕಾಂಗ್ರೆಸ್ನ ಮಹಿಳಾ ಅಭ್ಯರ್ಥಿ ಕಡೆಯವರು ಅಕ್ರಮ ಎಸಗಲು ಯತ್ನಿಸಿದ್ದು, ಪ್ರಶ್ನಿಸಿದ್ದಕ್ಕಾಗಿ ಪಕ್ಷೇತರ ಅಭ್ಯರ್ಥಿನಾದಿರಾ ನಫೀಜ್ ಅವರ ಪುತ್ರ ಮೊಹಮ್ಮದ್ ಶೋಯೆಬ್ ಅಹ್ಮದ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರು ನೀಡಲಾಗಿದೆ.
ಬೆಳಗಾವಿ –ಮತದಾನ ಶಾಂತಿಯುತ: ಇದೇ ಮೊದಲಿಗೆ ರಾಜಕೀಯ ಪಕ್ಷಗಳ ಸ್ಪರ್ಧೆಯಿಂದ ಗಮನ ಸೆಳೆದಿರುವ ಮಹಾನಗರಪಾಲಿಕೆಯ 58 ವಾರ್ಡ್ಗಳಿಗೆ ಶೇ50.41ರಷ್ಟು ಮತದಾನವಾಗಿದ್ದು, ಶಾಂತಿಯುತವಾಗಿತ್ತು.
ಮಾಳಿ ಗಲ್ಲಿಯಲ್ಲಿ ಕೆಲವರು ನಕಲಿ ಮತದಾನ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕ ಅನಿಲ ಬೆನಕೆ ಆರೋಪಿಸಿದರು. ಇದರಿಂದ ಕೆಲಕಾಲ ಗೊಂದಲ ಉಂಟಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.