ADVERTISEMENT

ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಂದು ಪತಿ ಆತ್ಮಹತ್ಯೆ

ಬೇರೊಬ್ಬಳ ಜೊತೆಗಿನ ಸಂಬಂಧವನ್ನು ಮಡದಿ ಪ್ರಶ್ನಿಸಿದಳೆಂಬ ಕಾರಣ

​ಪ್ರಜಾವಾಣಿ ವಾರ್ತೆ
Published 16 ಮೇ 2020, 20:15 IST
Last Updated 16 ಮೇ 2020, 20:15 IST
ಮನೀಶ್ ಕುಮಾರ್ ಮತ್ತು ಸಂಧ್ಯಾ
ಮನೀಶ್ ಕುಮಾರ್ ಮತ್ತು ಸಂಧ್ಯಾ    

ಬೆಂಗಳೂರು: ಬೇರೊಬ್ಬಳ ಜೊತೆಗಿನ ಸಂಬಂಧ ಪ್ರಶ್ನಿಸಿದಳೆಂಬ ಕಾರಣಕ್ಕೆ ತನ್ನ ಪತ್ನಿ ಸಂಧ್ಯಾ ಎಂಬುವರನ್ನು ಕೊಂದ ಆರೋಪಿ ಮನೀಶ್‌ಕುಮಾರ್‌ ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯ ಕೂಡ್ಲುಗೇಟ್ ಬಳಿ ಈ ಘಟನೆ ನಡೆದಿದೆ. ಸ್ಥಳದಲ್ಲಿ ಮರಣ ಪತ್ರ ಸಿಕ್ಕಿದ್ದು, ಅದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

‘ಬಿಹಾರದ ಮನೀಶ್ ಕುಮಾರ್ ಮತ್ತು ಸಂಧ್ಯಾ 2016ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಉದ್ಯೋಗ ಹುಡುಕಿಕೊಂಡು ಪತ್ನಿ ಜೊತೆಗೆ ಮನೀಶ್ ನಗರಕ್ಕೆ ಬಂದಿದ್ದರು. ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಅವರಿಗೆ ವ್ಯವಸ್ಥಾಪಕ ಕೆಲಸ ಸಿಕ್ಕಿತ್ತು. ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ದಂಪತಿ ನೆಲೆಸಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಮನೀಶ್ ಮಾತ್ರ ಕೆಲಸಕ್ಕೆ ಹೋಗುತ್ತಿದ್ದರು. ಪತ್ನಿ ಮನೆಯಲ್ಲೇ ಇರುತ್ತಿದ್ದರು. ಮದುವೆಗೂ ಮುನ್ನ ದೆಹಲಿ ಯುವತಿಯೊಬ್ಬರ ಜೊತೆ ಮನೀಶ್ ಸಲುಗೆ ಬೆಳೆಸಿಕೊಂಡಿದ್ದರು. ಮದುವೆ ಬಳಿಕವೂ ಅದೇ ಯುವತಿ ಜೊತೆ ಮಾತನಾಡುತ್ತಿದ್ದರು. ಆಗಾಗ ಭೇಟಿ ಸಹ ಆಗುತ್ತಿದ್ದರು’

‘ಯುವತಿ ಜೊತೆಗಿನ ಸಂಬಂಧವನ್ನು ಸಂಧ್ಯಾ ಪ್ರಶ್ನಿಸಿದ್ದರು.
ಅದೇ ವಿಚಾರವಾಗಿ ದಂಪತಿ ನಡುವೆ ಹಲವು ದಿನಗಳಿಂದ ಗಲಾಟೆ ಶುರುವಾಗಿತ್ತು. ಗಲಾಟೆಯೇ ವಿಕೋಪಕ್ಕೆ ಹೋಗಿದ್ದರಿಂದ ಮನೀಶ್, ಪತ್ನಿ ಸಂಧ್ಯಾ ಅವರನ್ನು ಕೊಲೆ ಮಾಡಿದ್ದಾರೆ. ಶನಿವಾರ ತಾವೂ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಬೆಡ್‌ಶೀಟ್‌ನಲ್ಲಿದ್ದ ಮೃತದೇಹ: ‘ಅಪಾರ್ಟ್‌ಮೆಂಟ್ ಸಮುಚ್ಚಯದ ಆವರಣದಲ್ಲಿ ಮನೀಶ್ ಮೃತದೇಹವಿತ್ತು. ಅವರ ಮನೆಯಲ್ಲಿ ಪರಿಶೀಲಿಸಿದಾಗ ಸಂಧ್ಯಾ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಸಿಕ್ಕಿತು’ ಎಂದರು.

‘ಮಲಗುವ ಕೊಠಡಿ ಬೆಡ್‌ಶೀಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಸಂಧ್ಯಾ ಮೃತದೇಹವಿತ್ತು. ಎರಡ್ಮೂರು ದಿನಗಳ ಹಿಂದೆ ಕೃತ್ಯ ನಡೆದಿರುವ ಅನುಮಾನವಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.