ಬೆಂಗಳೂರು:ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಕೆಲವರ ಒತ್ತಡಕ್ಕೆ ಮಣಿದು ದೂರು ನೀಡಿರುವುದಾಗಿ ಮತ್ತು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಸಂತ್ರಸ್ತ ಯುವತಿ ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ವಿಚಾರವಾಗಿ ಯುವತಿಯ ಮೇಲೆ ಒತ್ತಡ ಹೇರಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈಬಗ್ಗೆ ಮಾಧ್ಯಮಗಳಿಗೆ ಪತ್ರದ ಮೂಲಕ ಹೇಳಿಕೆ ನೀಡಿರುವಯುವತಿ, ʼಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ತನಿಖಾಧಿಕಾರಿಗಳ ಮುಂದೆಸೋಮವಾರ (ಏ.13 ರಂದು)ವ್ಯತಿರಿಕ್ತವಾದ ಹೇಳಿಕೆಗಳನ್ನು ನೀಡಿದ್ದೇನೆ. ನಾನು ದೂರು ಮತ್ತು ನ್ಯಾಯಾಧೀಶರ ಸಮ್ಮುಖದಲ್ಲಿ ಕೊಟ್ಟ164 ಹೇಳಿಕೆಗಳನ್ನು ಒತ್ತಡದಿಂದ ನೀಡಿದ್ದೇನೆ. ಆದ್ದರಿಂದ ಮತ್ತೊಮ್ಮೆ ಹೇಳಿಕೆ ಪಡೆಯಬೇಕು ಎಂದು ತನಿಖಾಧಿಕಾರಿಗಳನ್ನು ಕೇಳಿಕೊಂಡಿದ್ದೇನೆʼ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸತ್ಯಕ್ಕೆ ದೂರವಾಗಿದ್ದು, ನಾನು ಈಗಲೂ ಈ ಮೊದಲು ನೀಡಿದ ಹೇಳಿಕೆಗಳಿಗೆ ಬದ್ಧಳಾಗಿದ್ದೇನೆಎಂದು ತಿಳಿಸಿದ್ದಾರೆ.
ʼನಾನು ಪೋಷಕರೊಂದಿಗೆ ಮಾತನಾಡಿದ ಬಳಿಕ ನನ್ನ ಮನಪರಿವರ್ತನೆಯಾಗಿ ಪ್ರಕರಣದಿಂದ ಹಿಂದೆ ಸರಿದಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸತ್ಯಕ್ಕೆ ದೂರವಾಗಿದೆ. ನಾನು ತನಿಖಾಧಿಕಾರಿಗಳಿಗೆ ಕೆಲವು ಮಾಹಿತಿ ನೀಡಲು ಸಮಯಾವಕಾಶ ಕೋರಲು ಇಂದು (ಸೋಮವಾರ) ಹಾಜರಾಗಿದ್ದೆ. ಬೇರೆಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಎಸ್ಐಟಿಗೆ ಹೋಗುವ ಬಗ್ಗೆ ನನ್ನ ವಕೀಲರಿಗೆ ಈ ಮೊದಲೇ ಮಾಹಿತಿ ನೀಡಿದ್ದೆ. ಪ್ರಕರಣದ ಆರೋಪಿ ರಮೇಶ ಜಾರಕಿಹೊಳಿ ಅವರನ್ನು ವಿಚಾರಣೆಗೆ ಕರೆಸದಿರುವ ಬಗ್ಗೆ ಪೊಲೀಸ್ ಆಯುಕ್ತರಿಗೆ ಈಗಾಗಲೇ ದೂರು ನೀಡಿದ್ದೇನೆ. ಅವರು (ರಮೇಶ ಜಾರಕಿಹೊಳಿ) ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಕೊರೊನಾ ಪೀಡಿತರಂತೆ ನಟಿಸುತ್ತಿದ್ದು, ಮಾಧ್ಯಮಗಳಲ್ಲಿ ಈ ರೀತಿಯ ಸುದ್ದಿಗಳನ್ನು ಸೃಷ್ಟಿಸಿ ನನ್ನ ವಿರುದ್ಧ ಷಡ್ಯಂತ ಮಾಡುವ ಸಾಧ್ಯತೆ ಇದೆʼ ಎಂದು ಹೇಳಿಕೊಂಡಿದ್ದಾರೆ.
ಈ ಸಂಬಂಧ ಅವರು ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.