ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಡಳಿತ ಕಾರ್ಯವೈಖರಿ ಬಗ್ಗೆ ಅನಾಮಧೇಯವಾಗಿ ಪತ್ರ ಬರೆದವರು ಯಾರು ಎಂಬುದು ಗೊತ್ತಿದೆ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
‘ಬಿಜೆಪಿ ಶಾಸಕರು ಹಾಗೂ ಪಕ್ಷದ ಯಾವ ಕಾರ್ಯಕರ್ತರೂ ಪತ್ರ ಬರೆದಿಲ್ಲ. ಕೆಲವರು ಹತಾಶರಾಗಿ, ಮಾನಸಿಕ ಅತೃಪ್ತರು ಅಧಿಕಾರದ ಹುಚ್ಚತನದಿಂದ ಪತ್ರ ಬರೆದಿದ್ದಾರೆ. ಸಮಯಬಂದಾಗ ಅವರ ಹೆಸರು ಬಹಿರಂಗಪಡಿಸಲಾಗುವುದು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪತ್ರ ಬರೆದವರನ್ನು ರಾಜಕೀಯವಾಗಿ ಎದುರಿಸುವ ಶಕ್ತಿ ಇದೆ. ಧೈರ್ಯ ಇದ್ದರೆ ನೇರವಾಗಿ ಪತ್ರ ಬರೆಯಬೇಕು. ರಾಜಕೀಯವಾಗಿ ಹೋರಾಟ ನಡೆಸುವಂತೆ ಹೇಳಿದ್ದೇನೆ’ ಎಂದು ಹೇಳಿದರು.
‘ಬಿಜೆಪಿಯ 32 ಶಾಸಕರು ರಾಜೀನಾಮೆ ಕೊಡುತ್ತಾರೆ’ ಎಂದು ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಇಬ್ರಾಹಿಂ ಒಬ್ಬ ಜೋಕರ್. ಹಾಗಾಗಿ ಇಂತಹ ಹೇಳಿಕೆ ನೀಡುತ್ತಿರುತ್ತಾರೆ. ಇಬ್ರಾಹಿಂ ಅವರ ಮಾತಿಗೆ ಮಹತ್ವ ಕೊಡಬೇಕಾಗಿಲ್ಲ. ಬಾಯಿ ಚಪಲಕ್ಕೆ ಅವರು ಮಾತನಾಡುತ್ತಾರೆ’ ಎಂದು ಟೀಕಿಸಿದರು.
ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬ ಆಚರಣೆ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಇದು ರಾಜಕೀಯೇತರ ಕಾರ್ಯಕ್ರಮವಾಗಿದ್ದು, ಪಕ್ಷಾತೀತವಾಗಿ, ಜಾತ್ಯತೀತವಾಗಿ ನಡೆಯಲಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.