ADVERTISEMENT

ಮತಾಂತರ ನಿಲ್ಲಿಸದಿದ್ದರೆ ಸಿಕ್ಕಸಿಕ್ಕಲ್ಲಿ ಒದೆಯುತ್ತೇವೆ: ಮುತಾಲಿಕ್‌ ಎಚ್ಚರಿಕೆ

ಶ್ರೀರಾಮ ಸೇನೆ ಸಂಸ್ಥಾಪಕ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 13:20 IST
Last Updated 25 ನವೆಂಬರ್ 2021, 13:20 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌   

ವಿಜಯಪುರ: ‘ಕ್ರೈಸ್ತ ಪಾದ್ರಿಗಳು, ಧರ್ಮಗುರುಗಳು ಬಾಯಿ ಮುಚ್ಚಿಕೊಂಡು ತಮ್ಮ ಪಾಡಿಗೆ ತಾವು ಚರ್ಚ್‌ಗಳಲ್ಲಿ ಪ್ರಾರ್ಥನೆ ಮಾಡಿಕೊಂಡು ಇದ್ದರೇ ಸರಿ, ಹಿಂದೂಗಳನ್ನು ಮತಾಂತರ ಮಾಡುವುದು ನಿಲ್ಲಿಸದಿದ್ದರೇ ಸಿಕ್ಕಸಿಕ್ಕಲ್ಲಿ ಒದೆಯಬೇಕಾಗುತ್ತದೆ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಾಂತರ ದೇಶದ್ರೋಹದ ಕೆಲಸವಾಗಿದೆ. ಮತಾಂತರ ಗಂಡಾಂತರವಾಗುವುದರೊಳಗೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಮತಾಂತರ ನಿಷೇಧ ಕಾಯ್ದೆ ಜಾರಿ ಸಂಬಂಧ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ದೇಶದ ನಾಲ್ಕೈದು ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆ ಅಧ್ಯಯನ ಮಾಡಿ, ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆ ಮಂಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ADVERTISEMENT

ಅಶಿಕ್ಷಿತರು, ಬಡವರು ಈ ಮೊದಲು ಮತಾಂತರವಾಗುತ್ತಿದ್ದರು. ಆದರೆ, ಈಗ ಬ್ರಾಹ್ಮಣರು, ಲಿಂಗಾಯತರು, ಕುರುಬರು, ನಾಯಕ ಸಮುದಾಯದವರೂ ಮತಾಂತರವಾಗುತ್ತಿರುವುದು ಆತಂಕ ಮೂಡಿಸಿದೆ ಎಂದು ಹೇಳಿದರು.

ನಾಡಿನ ವಿವಿಧ ಜಾತಿಗಳ ಮಠಾಧೀಶರು, ಸ್ವಾಮೀಜಿಗಳು ಮಠ ಬಿಟ್ಟು ಹೊರಬರಬೇಕು, ಊರು, ಕೇರಿ ಸುತ್ತಾಡಿ ಮತಾಂತರ ತಡೆಗೆ ಜಾಗೃತಿ ಮೂಡಿಸಬೇಕು. ಅಸ್ಪೃಶ್ಯತೆ ಆಚರಣೆ ತಡೆಯಬೇಕು ಎಂದು ಹೇಳಿದರು.

ಲೂಟಿಕೋರರು, ಭ್ರಷ್ಟರು ಸರ್ಕಾರ ನಡೆಸುತ್ತಿದ್ದಾರೆ. ಮಠಾಧೀಶರು ರಾಜಕೀಯದಲ್ಲಿ ತೊಡಗಿದ್ದಾರೆ. ಬಿಜೆಪಿ ನಾಯಕರು ಹಿಂದೂ ಸಂಘಟನೆಗಳ ಮುಖಂಡರನ್ನು ದುರುಪಯೋಗ ಪಡಿಸಿಕೊಂಡಿರುವುದರಿಂದ ಸಂಘಟನೆಗಳು ಶಕ್ತಿಹೀನವಾಗಿವೆ. ಈ ಕಾರಣಕ್ಕೆ ಮತಾಂತರದ ಬಗ್ಗೆ ಯಾರೂ ಲಕ್ಷ್ಯ ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಧ್ವನಿ ವರ್ದಕ ಬಂದ್‌ ಮಾಡಿಸಿ:ರಾತ್ರಿ 10 ರಿಂದ ಬೆಳಿಗ್ಗೆ 6ರ ವರೆಗೆ ಧ್ವನಿವರ್ದಕ ಬಳಸಬಾರದು ಎಂದು ಸುಪ್ರೀಂಕೋರ್ಟ್‌ ಆದೇಶವಿದ್ದರೂ ಮಸೀದಿಗಳಲ್ಲಿ ಅವ್ಯಾಹತವಾಗಿ ಬಳಸಲಾಗುತ್ತಿದೆ. ಎಷ್ಟೋ ಮಸೀದಿಗಳು ಧ್ವನಿವರ್ದಕ ಬಳಕೆಗೆ ಅನುಮತಿಯನ್ನೂ ಪಡೆದುಕೊಂಡಿಲ್ಲ. ಶಾಲೆ, ಆಸ್ಪತ್ರೆ, ಸರ್ಕಾರಿ ಕಚೇರಿ ಸೇರಿದಂತೆ ನಿಶಬ್ಧ ವಲಯಗಳಲ್ಲೂ ಧ್ವನಿ ವರ್ದಕ ಬಳಸಲಾಗುತ್ತಿದೆ. ಆದರೂ ಸಹ ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಕಣ್ಣು, ಕಿವಿ ಮುಚ್ಚಿಕೊಂಡು ಇದ್ದಾರೆ ಎಂದು ಆರೋಪಿಸಿದರು.

ಮಸೀದಿಗಳಲ್ಲಿ ಬಳಸುವ ಧ್ವನಿ ವರ್ದಕ ತೆರವುಗೊಳಿಸುವಂತೆ ಶ್ರೀರಾಮಸೇನೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶೀಘ್ರ ಪ್ರತಿಭಟನೆ ನಡೆಸಲಿದೆ. ಅನಾಹುತವಾಗುವ ಮೊದಲು ಮಸೀದಿಗಳಲ್ಲಿ ಧ್ವನಿವರ್ದಕ ಬಳಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಗಲ್ಲಿಗೇರಿಸಬೇಕು:ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದಿರುವ ಭ್ರಷ್ಟ ಅಧಿಕಾರಿಗಳನ್ನು ಗಲ್ಲಿಗೇರಿಸಬೇಕು, ಸಾಲಾಗಿ ನಿಲ್ಲಿಸಿ ಗುಂಡು ಹೊಡೆಯಬೇಕು. ಇವರ ಹಿಂದೆ ರಾಜಕೀಯ ಕೃಪಾಪೋಷಿತರಿದ್ದು, ಅವರ ವಿರುದ್ಧವೂ ಕ್ರಮವಾಗಬೇಕು ಎಂದು ಆಗ್ರಹಿಸಿದರು.

ಭ್ರಷ್ಟರು, ಗುಂಡಾಗಳು ರಾಜಕೀಯದಲ್ಲಿ ತುಂಬಿಹೋಗಿದ್ದಾರೆ. ಮಚ್ಚು, ಲಾಂಗು, ಚಾಕು, ಚೈನು ಬಿಟ್ಟು, ಅಧಿಕಾರಿಗಳ ಮೂಲಕ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಶ್ರೀರಾಮ ಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾ ಘಟಕದ ಅಧ್ಯಕ್ಷ ರಾಕೇಶಮಠ, ರಾಜ್ಯ ಪ್ರಮುಖ ನೀಲಕಂಠ ಕಂದಗಲ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***

ಕ್ರೈಸ್ತರು ದೇಶದಲ್ಲಿ ಈಗಾಗಲೇ ಮತಾಂತರದ ಮೂಲಕ ನಾಗಲ್ಯಾಂಡ್‌, ಗುರ್ಖಾಲ್ಯಾಂಡ್‌ ನಿರ್ಮಿಸಿದ್ದಾರೆ. ಇವರನ್ನು ಹೀಗೆ ಬಿಟ್ಟರೆ ಭಾರತವನ್ನು ಕ್ರಿಶ್ಚಿಯನ್‌ ಲ್ಯಾಂಡ್‌ ಮಾಡುತ್ತಾರೆ.
–ಪ್ರಮೋದ್‌ ಮುತಾಲಿಕ್‌,ಸಂಸ್ಥಾಪಕ,ಶ್ರೀರಾಮ ಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.