ADVERTISEMENT

ಹಣ ಕೊಡಿಸುವುದು ನನ್ನ ಜವಾಬ್ದಾರಿ: ಯಡಿಯೂರಪ್ಪ

ಐಎಂಎ ಸಂತ್ರಸ್ತರಿಗೆ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 19:17 IST
Last Updated 15 ಜೂನ್ 2019, 19:17 IST
ಬೆಂಗಳೂರಿನಲ್ಲಿ ಶನಿವಾರ ಬಿಜೆಪಿಯ ಧರಣಿ ಸ್ಥಳಕ್ಕೆ ಬಂದ ಐಎಂಎ ಸಂತ್ರಸ್ತರು ಬಿ.ಎಸ್‌.ಯಡಿಯೂರಪ್ಪ ಅವರ ಬಳಿ ತಮ್ಮ ಅಳಲು ತೋಡಿಕೊಂಡರು ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಶನಿವಾರ ಬಿಜೆಪಿಯ ಧರಣಿ ಸ್ಥಳಕ್ಕೆ ಬಂದ ಐಎಂಎ ಸಂತ್ರಸ್ತರು ಬಿ.ಎಸ್‌.ಯಡಿಯೂರಪ್ಪ ಅವರ ಬಳಿ ತಮ್ಮ ಅಳಲು ತೋಡಿಕೊಂಡರು ಪ್ರಜಾವಾಣಿ ಚಿತ್ರ   

ಬೆಂಗಳೂರು:ಐಎಂಎ ಸಮೂಹಕಂಪನಿಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರಿಗೆ ಅದನ್ನು ವಾಪಸ್‌ ಕೊಡಿಸುವುದು ನನ್ನ ಜಬಾಬ್ದಾರಿ. ಪ್ರಮುಖ ಆರೋಪಿ ಮನ್ಸೂರ್ ಎಲ್ಲಿದ್ದರೂ ಕೇಂದ್ರ ಸರ್ಕಾರ ಹುಡುಕಿ ಕೊಡಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಜಿಂದಾಲ್‌ ಕಂಪನಿಗೆ ಜಮೀನು ನೀಡಿಕೆ ಮತ್ತು ಬರ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಪಕ್ಷದ ವತಿಯಿಂದ ಇಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶನಿವಾರ ಬಂದ ಐಎಂಎ ಸಂತ್ರಸ್ತರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ADVERTISEMENT

‘ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಗೆ ಕ್ರಮ ಕೈಗೊಳ್ಳಲಿದ್ದಾರೆ. ಸಿಬಿಐ ತನಿಖೆಯಿಂದಷ್ಟೇ ಅಮಾಯಕರಿಗೆ ನ್ಯಾಯ ಸಿಗಲು ಸಾಧ್ಯ’ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

‘ಕೇಂದ್ರ ಸರ್ಕಾರ ಕಳೆದ ಫೆಬ್ರುವರಿಯಲ್ಲೇ ಇಂತಹ ವಂಚಕ ಕಂಪನಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಈಗ ಅಮಾಯಕರಿಗೆ ಮೋಸ ಆಗಿರುವುದಕ್ಕೆ ರಾಜ್ಯವೇ ನೇರ ಹೊಣೆಯಾಗುತ್ತದೆ’ ಎಂದು ಹೇಳಿದರು.

ವಿಜಯಪುರದಲ್ಲೂ ₹18 ಲಕ್ಷ ಹೂಡಿಕೆ (ವಿಜಯಪುರ ವರದಿ): ಐಎಂಎ (ಐ ಮಾನಿಟರಿ ಅಡ್ವೈಸರಿ) ಜ್ಯವೆಲ್ಲರಿ ಕಂಪನಿಯಲ್ಲಿ ವಿಜಯಪುರದ ನಾಲ್ಕು ಜನರು ₹18 ಲಕ್ಷ ಹೂಡಿಕೆ ಮಾಡಿರುವುದಾಗಿ ಶನಿವಾರ ಇಲ್ಲಿಯ ಗಾಂಧಿಚೌಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ‘ಮೆಹಬೂಬ್ ಮುರ್ತುಜಸಾಬ್ಕುಂ ಟೋಜಿ, ಇವರ ಪತ್ನಿ ಕೌಸರ್‌ಬಾನು ಅವರು ತಲಾ ₹2 ಲಕ್ಷ, ಸೈಯ್ಯದ್ ಮುಕ್ತಾರ್ಜಾ ಗೀರದಾರ್, ಇವರ ಪತ್ನಿ ಸಯೀದಾ ಸಲ್ಮಾ ಅವರು ಕ್ರಮವಾಗಿ ₹8 ಲಕ್ಷ ಮತ್ತು ₹6 ಲಕ್ಷ ಹೂಡಿಕೆ ಮಾಡಿ ಮೋಸ ಹೋಗಿರುವುದಾಗಿ ತಿಳಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ತಿಳಿಸಿದ್ದಾರೆ.

ಆಂಬಿಡೆಂಟ್‌ನಲ್ಲೂ ಹಣ ಹೂಡಿದ್ದರು!

‘ಐಎಂಎ ಜ್ಯುವೆಲ್ಸ್‌’ ಕಂಪನಿಯಿಂದ ವಂಚನೆಗೆ ಒಳಗಾಗಿರುವ ಬಹುತೇಕ ಷೇರುದಾರರು ‘ಆಂಬಿಡೆಂಟ್‌’ ಕಂಪನಿಯಲ್ಲೂ ಹಣ ಹೂಡಿಕೆ ಮಾಡಿದ್ದರು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

‘ಆಂಬಿಡೆಂಟ್‌’ ಕಂಪನಿಯಲ್ಲಿ ಹೂಡಿಕೆ ಮಾಡಿರುವ ಶೇ 60ರಿಂದ 70ರಷ್ಟು ಜನ ಐಎಂಎ ಜ್ಯುವೆಲ್ಸ್‌ನಲ್ಲೂ ಹಣ ಹೂಡಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.