ಹುಬ್ಬಳ್ಳಿ: ‘ಹಿಂದೂ ಧರ್ಮಕ್ಕೆ ಕಂಟಕವಾಗಿರುವ ಹೆಣ್ಣು ಭ್ರೂಣ ಹತ್ಯೆ,ಅಸ್ಪೃಶ್ಯತೆ ಆಚರಣೆಯಂತಹ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಿ, ಅಂತರ್ ಶುದ್ಧಿ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಸ್ವಯಂ ಶುದ್ಧೀಕರಣದ ಬಗ್ಗೆ ಸಮಾಜ ಚಿಂತಿಸಬೇಕಾಗಿದೆ’ ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದರು.
ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ಟ್ರಸ್ಟ್, ಪ್ರೇರಣಾ ಸೇವಾ ಸಂಸ್ಥೆಯು ಇಲ್ಲಿನ ಪುರುಷೋತ್ತಮ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಧರ್ಮಸಿರಿ ನೂತನ ಕಟ್ಟಡದ ಪ್ರವೇಶ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಅನಿಷ್ಟ ಪದ್ಧತಿಗಳನ್ನು ತೊಡೆದು ಹಿಂದೂ ಧರ್ಮವನ್ನು ಸಶಕ್ತಗೊಳಿಸಬೇಕಾಗಿದೆ. ಧರ್ಮದ ಆಧಾರದಲ್ಲಿ ದೇಶ ವಿಭಜನೆಯಾಗಿರುವುದು ಇತಿಹಾಸ. ಪುನಃ ವಿಭಜನೆಯಾಗುವ ಅಪಾಯ ಇದ್ದೇ ಇದೆ. ಈ ನಿಟ್ಟಿನಲ್ಲಿ ಧರ್ಮದ ಅನುಯಾಯಿಗಳ ರಕ್ಷಣೆಯ ಅವಶ್ಯಕತೆ ಇದೆ’ ಎಂದರು.
‘ಅದಕ್ಕಾಗಿ 58 ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ಧರ್ಮ ಹಾಗೂ ಅನುಯಾಯಿಗಳನ್ನು ರಕ್ಷಣೆ ಮಾಡುವಲ್ಲಿ ತೊಡಗಿದೆ’ ಎಂದು ಹೇಳಿದರು.
‘ಹಿಂದೂ ಧರ್ಮದ ಅಡಿಪಾಯವಾಗಿರುವ ವೈವಾಹಿಕ ಪದ್ಧತಿಯೂ ಇಂದು ಅಪಾಯದ ಸ್ಥಿತಿಯಲ್ಲಿದೆ. ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾಖಲಾಗುತ್ತಿರುವ ಪ್ರಕರಣ
ಗಳಲ್ಲಿ ಶೇ 80ರಷ್ಟು ಪ್ರಕರಣಗಳು ಹಿಂದೂ ಕುಟುಂಬಗಳದ್ದು. ಹೆಚ್ಚಿನವು ವೈವಾಹಿಕ ಜೀವನಕ್ಕೆ ಸಂಬಂಧಿಸಿದವು. ವೈವಾಹಿಕ ವ್ಯವಸ್ಥೆ ಬಲಪಡಿಸಬೇಕಾಗಿದೆ. ಧಾರ್ಮಿಕ ನಾಯಕರು, ಮುಖಂಡರು, ಸಂತರು ಮಾರ್ಗದರ್ಶನ ನೀಡಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.