ಬೆಂಗಳೂರು: ‘ಜಾಗತಿಕ ಮಟ್ಟದಲ್ಲಿ ಭಾರತ ನಗೆಪಾಟಲಿಗೀಡಾಗಿಲ್ಲ. ಕ್ವಾಡ್ ದೇಶಗಳು, ಜಿ-7 ರಾಷ್ಟ್ರಗಳ ವೇದಿಕೆ, ಜಾಗತಿಕ ವಾತಾವರಣ ಕುರಿತ ಚರ್ಚೆ ಮುಂತಾದ ವೇದಿಕೆಗಳಲ್ಲಿ ಭಾರತಕ್ಕೆ ದೊರೆತ ಗೌರವಗಳೇ ಇದಕ್ಕೆ ಸಾಕ್ಷಿ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಮರ್ಥಿಸಿಕೊಂಡಿದ್ದಾರೆ.
‘ಜಾಗತಿಕ ನಾಯಕರು ಭಾರತದ ಬಗ್ಗೆ ಇರಿಸಿರುವ ನಿರೀಕ್ಷೆಗಳೇ ಭಾರತದ ವಿದೇಶಾಂಗ ನೀತಿಯ ಯಶಸ್ಸನ್ನು ತೋರಿಸುತ್ತವೆ. ಹಲವು ದೇಶಗಳು ಕೋವಿಡ್-19 ಕಾರಣದಿಂದ ತೀವ್ರ ಬಿಕ್ಕಟ್ಟು ಎದುರಿಸುತ್ತಿವೆ. ಆದರೆ, ಸವಾಲಿನ ನಡುವೆಯೇ ಭಾರತವು ತನ್ನದೇ ಆದ ರೀತಿಯಲ್ಲಿ ಸಮರ್ಥವಾಗಿ ನಿಭಾಯಿಸಿ, ಆರ್ಥಿಕತೆ ಕುಸಿತವನ್ನು ತಡೆಗಟ್ಟಿದೆ’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ರಾಜಕೀಯ ಆರೋಪ- ಚರ್ಚೆಗಳು ಏನೇ ಇದ್ದರೂ ವ್ಯಾಖ್ಯಾನಗಳ ಅಂತಿಮ ಪರೀಕ್ಷೆಯಾಗುವುದು ಜನತಾ ನ್ಯಾಯಾಲಯದಲ್ಲಿ. ದೇಶದ ಆರ್ಥಿಕತೆಯನ್ನು ಉತ್ತಮವಾಗಿ ನಿಭಾಯಿಸಲಾಗಿದೆ. ಇದಕ್ಕಾಗಿಯೇ ಎರಡು ಚುನಾವಣೆಗಳಲ್ಲಿ ಜನರು ಬೆಂಬಲಿಸಿದ್ದಾರೆ’ ಎಂದು ಜೈಶಂಕರ್ ಹೇಳಿದರು.
‘ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಬೆಂಗಳೂರು ಜಾಗತಿಕ ಬ್ರ್ಯಾಂಡ್ ಆಗುತ್ತಿದೆ. ಮೂಲಸೌಕರ್ಯಗಳ ಸುಧಾರಣೆ ಎಂಬುದು ಮುಗಿಯದ ವಿದ್ಯಮಾನ’ ಎಂದರು.
‘ಹಲವಾರು ವಿದೇಶಿ ಕಂಪನಿಗಳು ಭಾರತಕ್ಕೆ ಬರಲು ಉತ್ಸುಕತೆ ತೋರುತ್ತಿವೆ. ಇದು ಭಾರತದ ಮೇಲಿಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ. ಇದರ ಲಾಭ ಬೆಂಗಳೂರಿಗೂ ಆಗಲಿದೆ’ ಎಂದು ಹೇಳಿದರು.
‘ಮುಂದಿನ ತಿಂಗಳು ಅಮೆರಿಕ ಭೇಟಿ ಸಂದರ್ಭ ಬೆಂಗಳೂರಿನಲ್ಲಿ ಅಮೆರಿಕ ಕಾನ್ಸಲೇಟ್ ತೆರೆಯುವ ಕುರಿತು ಪ್ರಸ್ತಾಪಿಸಲಾಗುವುದು. ಕಾನ್ಸಲೇಟ್ ತೆರೆಯುವ ಬಗ್ಗೆ ಬೆಂಗಳೂರು ಹಾಗೂ ಹೈದರಾಬಾದ್ ನಡುವಿನ ಸ್ಫರ್ಧೆಯಲ್ಲಿ ಅಮೆರಿಕ 2006ರಲ್ಲಿ ಎರಡನೆಯದನ್ನೇ ಆಯ್ಕೆ ಮಾಡಿಕೊಂಡಿತ್ತು. ಅದು ಆ ದೇಶದ ನಿರ್ಧಾರ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.