ಮಲ್ಲಿಕಾರ್ಜುನ ಖರ್ಗೆ
ಮೈಸೂರು: ‘ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿದ್ದರೇ ಎಂದು ಬಿಜೆಪಿಯವರು ಕೇಳುತ್ತಾರೆ. ಅಂಬೇಡ್ಕರ್ ಸಂವಿಧಾನ ಬರೆಯದೇ ನಿಮ್ಮ ತಾತ ಆರ್ಎಸ್ಎಸ್ ನವರು ಬರೆದರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
‘ಸಂವಿಧಾನ ರೂಪಿಸಿದ್ದೇ ಅಂಬೇಡ್ಕರ್. ಆ ಸಂವಿಧಾನದಿಂದಲೇ ಮೋದಿ ಪ್ರಧಾನಿ ಆಗಿದ್ದು. ಈಗ ಅದೇ ಸಂವಿಧಾನವನ್ನು ಕೊಲೆ ಮಾಡಲು ಹೊರಟಿದ್ದಾರೆ’ ಎಂದು ಅವರು ಟೀಕಿಸಿದರು. ‘ಬಿಜೆಪಿ ಹಾಗೂ ಆರ್ಎಸ್ಎಸ್ ಸಂವಿಧಾನ ಬದಲಾವಣೆಯ ಪ್ರಯತ್ನ ಮುಂದುವರಿಸಿದ್ದು ನೀವೆಷ್ಟೇ ತಿಪ್ಪರಲಾಗ ಹಾಕಿದರೂ ಈ ದೇಶದ ಜನ ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.
‘42 ದೇಶ ಸುತ್ತಿರುವ ಮೋದಿಗೆ ಗಲಭೆಪೀಡಿತ ಮಣಿಪುರದ ಜನರ ಸಮಸ್ಯೆ ಕೇಳಲು ಸಮಯವಿಲ್ಲ. ದೂರದರ್ಶನದಲ್ಲಿ ಹಿಂದಿನ ಯಾವ ಪ್ರಧಾನಿಯೂ ಈಗಿನವರಂತೆ ನಿತ್ಯ ಬೊಗಳುತ್ತಿರಲಿಲ್ಲ. ಅವರೊಬ್ಬ ನಂ. 1 ಸುಳ್ಳುಗಾರ’ ಎಂದು ಟೀಕಿಸಿದರು.
‘ದೇಶದ ವಿವಿಧೆಡೆ ಕಾಂಗ್ರೆಸ್ ಸೋತಿರಬಹುದು. ಆದರೆ ಬಿದ್ದವರು ಮೇಲೇಳಲೇ ಬೇಕು. ಇಂದಿಗೂ ಲಕ್ಷಾಂತರ ಜನ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎಂದು ಆಶಿಸುತ್ತಾರೆ. ಕಾಂಗ್ರೆಸ್ ದೇಶಕ್ಕೆ ಕೊಟ್ಟ ಕೊಡುಗೆ ಜನರ ಮುಂದೆ ಇದೆ. ಆದರೆ ಮೋದಿ ಸಾರ್ವಜನಿಕ ಉದ್ಯಮಗಳನ್ನು ಮುಚ್ಚಿ ಅದಾನಿ- ಅಂಬಾನಿಗೆ ದೇಶದ ಆಸ್ತಿಯನ್ನು ಮಾರುತ್ತಿದ್ದಾರೆ’ ಎಂದು ಟೀಕಿಸಿದರು.
‘ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಆಗಿಲ್ಲ. ಸಿದ್ದರಾಮಯ್ಯ ಹಣಕಾಸು ಸಚಿವರಾದಾಗಲೆಲ್ಲ ಲಕ್ಷ್ಮಿ ಕುಂಟಾಗಿ ಖಜಾನೆಯಲ್ಲಿಯೇ ಕುಳಿತಿರುತ್ತಾಳೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.