ಬೆಂಗಳೂರು: ‘ಹೊರಗಡೆ ಬಂದು ಸೀನಿ, ವೈರಸ್ ಹರಡಿ’ ಎಂದು ತನ್ನ ಫೇಸ್ಬುಕ್ ಖಾತೆಯಲ್ಲಿ ಬರೆದು ಸಾರ್ವಜನಿಕರಿಗೆ ಕರೆ ನೀಡಿದ್ದ ಇನ್ಫೋಸಿಸ್ ಕಂಪನಿಯ ಸಾಫ್ಟ್ವೇರ್ ಎಂಜಿನಿಯರ್ ಮುಜೀಬ್ ಮೊಹಮ್ಮದ್ (34) ಎಂಬಾತನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.
ಮೊದಲಿಗೆ ಇದು ತಪ್ಪಾಗಿ ಗುರುತಿಸಲ್ಪಟ್ಟಿರುವ ಪ್ರಕರಣವಿರಬೇಕು ಎಂದು ನಂಬಿದ್ದ ಇನ್ಫೋಸಿಸ್, ಮುಜೀಬ್ ತನ್ನ ಉದ್ಯೋಗಿ ಎಂಬುದನ್ನು ದೃಢಪಡಿಸಿದೆ ಮತ್ತು ಆತನನ್ನು ಸೇವೆಯಿಂದ ವಜಾಗೊಳಿಸಿದೆ.
‘ಮಹದೇವಪುರ ಸಮೀಪದ ಎ. ನಾರಾಯಣಪುರದ ಮುಜೀಬ್, ಇನ್ಫೊಸಿಸ್ ಕಂಪನಿಯಲ್ಲಿ ಹಿರಿಯ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ತಿಂಗಳಿಗೆ ₹1.40 ಲಕ್ಷ ಸಂಬಳ ಪಡೆಯುತ್ತಿದ್ದ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದರು.
ತನ್ನ ಉದ್ಯೋಗಿಯೊಬ್ಬ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ನಲ್ಲಿ ಬರೆದಿರುವ ಕುರಿತು ಇನ್ಫೋಸಿಸ್ ತನಿಖೆಯನ್ನು ಪೂರ್ಣಗೊಳಿಸಿದೆ ಮತ್ತು ಇದು ತಪ್ಪಾಗಿ ಗುರುತಿಸಲ್ಪಟ್ಟ ಪ್ರಕರಣವಲ್ಲ ಎಂಬುದನ್ನು ನಾವು ನಂಬುತ್ತೇವೆ ಎಂದು ಶನಿವಾರ ತಡರಾತ್ರಿ ಟ್ವೀಟ್ ಮಾಡಿದೆ.
‘Spread the word to end the word’ ಎಂದು ತನ್ನ ಫೋಟೊ ಸಮೇತವೇ ಆರೋಪಿ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದ. ಆ ಬಗ್ಗೆ ಸಾರ್ವಜನಿಕರೊಬ್ಬರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಕೆಲ ಗಂಟೆಯಲ್ಲೇ ಶುಕ್ರವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.