ಬೆಂಗಳೂರು: ನಗರದ ಮೂರು ಉಪನೋಂದಣಾಧಿಕಾರಿ ಕಚೇರಿಗಳಿಗೆ ಭೇಟಿ ನೀಡಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸಿದೆ.
₹30 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಆಸ್ತಿ ನೋಂದಣಿ ಮಾಡಿಸಿದವರ ವಿವರಗಳನ್ನು ಕಾಲಕಾಲಕ್ಕೆ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು. ಇಂದಿರಾನಗರ, ಹೆಬ್ಬಾಳ ಹಾಗೂ ಹಲಸೂರು ಉಪನೋಂದಣಾಧಿಕಾರಿ ಕಚೇರಿಗಳು ವಿವರಗಳನ್ನು ಸಮರ್ಪಕವಾಗಿ ಸಲ್ಲಿಸಿರಲಿಲ್ಲ. ದೊಡ್ಡ ಪ್ರಮಾಣದ ಆಸ್ತಿ ಖರೀದಿ ಮತ್ತು ಮಾರಾಟ ಮಾಡಿದವರಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಮೂರು ಕಚೇರಿಗಳಿಗೆ ಭೇಟಿ ನೀಡಿದ್ದರು ಎಂದು ಮೂಲಗಳು ಹೇಳಿವೆ.
ಜಮೀನು, ಅಪಾರ್ಟ್ಮೆಂಟ್, ಮನೆ ಖರೀದಿಸಿದ ಮೌಲ್ಯ ₹30 ಲಕ್ಷಕ್ಕಿಂತ ಹೆಚ್ಚಾಗಿದ್ದರೆ ಈ ಮಾಹಿತಿಗಳನ್ನು ಸಂಬಂಧಪಟ್ಟ ಉಪನೋಂದಣಾಧಿಕಾರಿ ಕಚೇರಿಗಳು ಆದಾಯ ತೆರಿಗೆ ಇಲಾಖೆಗೆ ರವಾನಿಸಬೇಕು. ಆಸ್ತಿ ಖರೀದಿಸಿದವರು ಯಾವ ರೂಪದಲ್ಲಿ (ಚೆಕ್, ಡಿ.ಡಿ ಅಥವಾ ನಗದು) ಹಣ ನೀಡಿದ್ದಾರೆ ಎಂಬ ವಿವರವು ಕ್ರಯಪತ್ರದಲ್ಲಿ ಇರುತ್ತದೆ. ಅದರ ಮಾಹಿತಿ ಕಳುಹಿಸಬೇಕಿದೆ. ಇದರ ಆಧಾರದ ಮೇಲೆ, ಹಣದ ಮೂಲವನ್ನು ಇಲಾಖೆ ಪತ್ತೆ ಹಚ್ಚುತ್ತದೆ. ಬೃಹತ್ ಮೊತ್ತದ ವ್ಯವಹಾರ ನಡೆಸಿದವರ ಮಾಹಿತಿಗಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಉಪನೋಂದಣಾಧಿಕಾರಿ ಕಚೇರಿಗಳಿಗೆ ಭೇಟಿ ನೀಡಿ, ದಾಖಲೆ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.