ಬೆಂಗಳೂರು: ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಸುಧಾರಣೆ ತರಲು ಮುಂದಾಗಿರುವ ಸರ್ಕಾರ ‘ಇಸ್ರೇಲ್ ತಂತ್ರಜ್ಞಾನ ಆಧಾರಿತ ಸಮಗ್ರ ಬೇಸಾಯ ಅಭಿಯಾನ’ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದು, ಯೋಜನೆ ಅನುಷ್ಠಾನಕ್ಕಾಗಿ ಮಿಷನ್ ನಿರ್ದೇಶಕ ಹುದ್ದೆಯನ್ನು ಸೃಜಿಸಿದೆ.
ಐಎಎಸ್ ಶ್ರೇಣಿಯ ಅಧಿಕಾರಿ ನಿರ್ದೇಶಕರಾಗಿದ್ದು, ಅಭಿಯಾನ ಮಾದರಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಅಭಿಯಾನದಡಿಯಲ್ಲಿ ಕಿರು ನೀರಾವರಿ ಕೋಶ, ಇಸ್ರೇಲ್ ತಂತ್ರಜ್ಞಾನ ಆಧಾರಿತ ಕೃಷಿ ಕೋಶ ಹಾಗೂ ಇಸ್ರೇಲ್ ತಂತ್ರಜ್ಞಾನ ಆಧಾರಿತ ತೋಟಗಾರಿಕೆ ಕೋಶಗಳನ್ನು ರಚಿಸಲಾಗುತ್ತದೆ. ಮೇಲುಸ್ತುವಾರಿಗಾಗಿ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.
ಜಲಸಂಪನ್ಮೂಲ ಇಲಾಖೆಯಲ್ಲಿ ಸ್ಥಾಪಿಸಲಾಗುವ ಕಿರು ನೀರಾವರಿ ಕೋಶವು ಇಸ್ರೇಲ್ ತಂತ್ರಜ್ಞಾನ ಆಧಾರಿತ ಬೇಸಾಯ ಕ್ರಮ ಅಳವಡಿಸುವ ಗ್ರಾಮಗಳಲ್ಲಿ ಬೃಹತ್ ಪ್ರಮಾಣದಲ್ಲಿ ನೀರನ್ನು ಒದಗಿಸಲು ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅನುಷ್ಠಾನಗೊಳಿಸಲಿದೆ.
ಉಳಿದ ಎರಡು ಕೋಶಗಳು ಸೂಕ್ಷ್ಮ ನೀರಾವರಿ ಯೋಜನೆಗಳನ್ನು ಬಳಸಿ ಉತ್ತಮ ಕೃಷಿ ಹಾಗೂ ತೋಟಗಾರಿಕೆ ಪದ್ಧತಿಗಳನ್ನು ಅಳವಡಿಸಲು ಪ್ರೋತ್ಸಾಹಿಸಲಿವೆ. ಜತೆಗೆ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಿವೆ.
ಬಜೆಟ್ನಲ್ಲಿ ಈ ಯೋಜನೆ ಅನುಷ್ಠಾನಕ್ಕಾಗಿ ₹300 ಕೋಟಿ ನೀಡಲಾಗಿದೆ. ಈ ಪೈಕಿ ತಲಾ ₹150 ಕೋಟಿಗಳನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ.
ಯಾವ ಜಿಲ್ಲೆಗಳಲ್ಲಿ ಪ್ರಯೋಗ
ಕೃಷಿ: ಕೋಲಾರ, ಚಿತ್ರದುರ್ಗ, ಕೊಪ್ಪಳ, ಗದಗ
ತೋಟಗಾರಿಕೆ: ಉತ್ತರ ಕನ್ನಡ, ತುಮಕೂರು, ಯಾದಗಿರಿ, ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.