ಜನಾರ್ದನ ರೆಡ್ಡಿ ಹಾಗೂ ಶಶಿಕಾಂತ ಸೆಂಥಿಲ್
ಬೆಂಗಳೂರು: ‘ಧರ್ಮಸ್ಥಳಕ್ಕೆ ಕಳಂಕ ತರುವ ಪಿತೂರಿಯ ಹಿಂದಿನ ರೂವಾರಿ ಸಸಿಕಾಂತ್ ಸೆಂಥಿಲ್’ ಎಂದು ಆರೋಪಿಸಿದ್ದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ತಮಿಳುನಾಡಿನ ತಿರುವಳ್ಳೂರು ಸಂಸದ ಸಸಿಕಾಂತ್ ಸೆಂಥಿಲ್ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ.
ಈ ಸಂಬಂಧ ದೂರುದಾರ ಸಸಿಕಾಂತ್ ಸೆಂಥಿಲ್ ಅವರ ಸ್ವಯಂ ಸ್ವಯಂ ಹೇಳಿಕೆ ದಾಖಲಿಸಲು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ವಿಚಾರಣೆಯನ್ನು ಇದೇ 29ಕ್ಕೆ ನಿಗದಿಪಡಿಸಿದ್ದಾರೆ.
ಖಾಸಗಿ ದೂರು: ‘ಜಿ. ಜನಾರ್ದನ ರೆಡ್ಡಿ ರಾಜಕೀಯ ದುರುದ್ದೇಶದಿಂದ ನನ್ನ ಹೆಸರನ್ನು ಉಲ್ಲೇಖಿಸಿ ಆಧಾರಹಿತ ಸುಳ್ಳು ಆರೋಪ ಮಾಡಿದ್ದಾರೆ. ನಾನು ಈ ಹಿಂದೆ ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಶಾಸಕರಾಗಿದ್ದರು. ಬಳ್ಳಾರಿಯಲ್ಲಿ ರೆಡ್ಡಿ ಎಸಗಿದ್ದ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಇಸಿ ಮತ್ತು ಸಿಬಿಐಗೆ ನೆರವು ನೀಡಿದ್ದೆ. ಹಲವು ಅಕ್ರಮಗಳನ್ನು ಬಯಲು ಮಾಡಿದ್ದೆ. ಇದರಿಂದ, ಜನಾರ್ದನ ರೆಡ್ಡಿ ದ್ವೇಷ ಸಾಧಿಸುತ್ತಿದ್ದರು’ ಎಂದು ಸೆಂಥಿಲ್ ದೂರಿನಲ್ಲಿ ಆರೋಪಿಸಿದ್ದಾರೆ. ಸಸಿಕಾಂತ್ ಸೆಂಥಿಲ್ ಪರ ಹೈಕೋರ್ಟ್ ವಕೀಲರಾದ ಸೂರ್ಯ ಮುಕುಂದರಾಜ್ ಮತ್ತು ಸಂಜಯ ಯಾದವ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.