ಬೆಂಗಳೂರು: ‘ರಾಜ್ಯ ಸರ್ಕಾರವು ಬಿಡದಿ ಬಳಿ ಟೌನ್ಶಿಪ್ ನಿರ್ಮಿಸಲು ರೈತರ ಫಲವತ್ತಾದ 9,000 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದರ ವಿರುದ್ಧ, ಜೆಡಿಎಸ್ ಭಾನುವಾರದಿಂದ ದೊಡ್ಡಮಟ್ಟದ ಹೋರಾಟ ಆರಂಭಿಸಲಿದೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ (ಜಿಬಿಐಟಿ) ನಿರ್ಮಾಣಕ್ಕೆ ಹತ್ತು ಹಳ್ಳಿಗಳ ಜಮೀನನ್ನು ಸರ್ಕಾರವು ಗುರುತಿಸಿದೆ. ಇದು ಅತ್ಯಂತ ಫಲವತ್ತಾದ ಮತ್ತು ನೀರಾವರಿ ಜಮೀನಾಗಿದೆ. ಇದನ್ನು ನಂಬಿಕೊಂಡು 3,500 ಕುಟುಂಬಗಳ 16,000 ಜನರು ಬದುಕು ರೂಪಿಸಿಕೊಂಡಿದ್ದಾರೆ. ಅವರ ಬದುಕನ್ನು ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ’ ಎಂದು ಆರೋಪಿಸಿದರು.
‘ಈ ಹಳ್ಳಿಗಳು ಪ್ರತಿ ತಿಂಗಳು 6.50 ಲಕ್ಷ ಲೀಟರ್ನಷ್ಟು ಹಾಲು ಉತ್ಪಾದಿಸುತ್ತವೆ. ಅಪಾರ ಪ್ರಮಾಣದ ತರಕಾರಿ, ಸೊಪ್ಪು, ತೆಂಗಿನಕಾಯಿ ಬೆಳೆಯಲಾಗುತ್ತದೆ. ಇಂತಹ ಫಲವತ್ತಾದ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ನಿರ್ಧಾರಕ್ಕೂ ಮುನ್ನ, ರೈತರೊಂದಿಗೆ ಸೌಜನ್ಯಕ್ಕಾದರೂ ಸಭೆ ನಡೆಸಿಲ್ಲ. ಇಲ್ಲಿನ ಶೇ 80ರಷ್ಟು ರೈತರು ಈ ಯೋಜನೆಯ ವಿರುದ್ಧ ಇದ್ದಾರೆ’ ಎಂದರು.
‘ರೈತರನ್ನು ಬೆಂಬಲಿಸಿ ರಾಮನಗರ ಜಿಲ್ಲೆಯ ಬೈರಮಂಗಲ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಭಾನುವಾರ ಹೋರಾಟ ಆರಂಭಿಸಲಾಗುತ್ತದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸರ್ಕಾರ ಈ ಯೋಜನೆ ಕೈಬಿಡುವವರೆಗೂ, ದೇವನಹಳ್ಳಿಯ ಚನ್ನರಾಯಪಟ್ಟಣ ರೈತರ ಮಾದರಿಯಲ್ಲಿಯೇ ಹೋರಾಟ ನಡೆಸುತ್ತೇವೆ’ ಎಂದರು.
ಈ ಹೋರಾಟ ರೈತರ ಪರವಾಗಿಯೋ ಅಥವಾ ಟೌನ್ಶಿಪ್ ವಿರುದ್ಧವೋ ಅಥವಾ ಡಿ.ಕೆ.ಶಿವಕುಮಾರ್ ವಿರುದ್ಧವೋ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಇದು ರೈತರ ಪರವಾದ ಹೋರಾಟ. ನಾವು ಯಾರ ವಿರುದ್ಧವೂ ವೈಯಕ್ತಿಕ ಹೋರಾಟ ನಡೆಸುತ್ತಿಲ್ಲ. ಟೌನ್ಶಿಪ್ ವಿರೋಧಿಗಳೂ ಅಲ್ಲ’ ಎಂದು ನಿಖಿಲ್ ಉತ್ತರಿಸಿದರು.
‘ಹಾರೋಹಳ್ಳಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು 950 ಎಕರೆ ಸ್ವಾಧೀನ ಮಾಡಿಕೊಂಡಿದ್ದು, ಅದನ್ನು ಬಳಸಿಲ್ಲ. ಆ ಜಮೀನಿನಲ್ಲೇ ಟೌನ್ಶಿಪ್ ಅಭಿವೃದ್ಧಿಪಡಿಸಲಿ’ ಎಂದರು.
ನ್ಯಾಯ ಕೇಳಿದ ರೈತರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆದರಿಕೆ ಹಾಕುತ್ತಾರೆ. ರೈತರ ಬಗೆಗೆ ಅವರಿಗೆ ಇರುವ ಕಾಳಜಿ ಎಂಥದ್ದು ಎಂಬುದು ಇದರಿಂದಲೇ ಗೊತ್ತಾಗುತ್ತದೆನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.