ADVERTISEMENT

ಕೊರೊನಾ ಸೋಂಕು ಹೆಚ್ಚಳಕ್ಕೆ ಜಿಂದಾಲ್‌ ಕಾರಣ: ಪ್ರತಾಪ ರೆಡ್ಡಿ ಆರೋಪ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 7:46 IST
Last Updated 29 ಜುಲೈ 2020, 7:46 IST
ಜೆಡಿಎಸ್ ಮುಖಂಡ ಎನ್‌. ಪ್ರತಾಪ ರೆಡ್ಡಿ
ಜೆಡಿಎಸ್ ಮುಖಂಡ ಎನ್‌. ಪ್ರತಾಪ ರೆಡ್ಡಿ   

ಬಳ್ಳಾರಿ: ‘ಜಿಂದಾಲ್ ನಿಂದಾಗಿಯೇ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ. ಜಿಂದಾಲ್‌ನಿಂದ ಜಿಲ್ಲೆಯ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ’ಎಂದು ಜೆಡಿಎಸ್ ಮುಖಂಡ ಎನ್‌. ಪ್ರತಾಪ ರೆಡ್ಡಿ ಆರೋಪಿಸಿದರು.

‘ಆರಂಭದಲ್ಲಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿತ್ತು. ಜಿಂದಾಲ್ ನಲ್ಲಿ ಸೋಂಕಿತರು ಕಂಡು ಬಂದ ಬಳಿಕ ಜಿಲ್ಲೆಯ ನಾನಾ ಕಡೆ ಹಬ್ಬಿತು. ಜಿಲ್ಲಾಡಳಿತದ ಆದೇಶ ಮೀರಿಯೂ ಜಿಂದಾಲ್ ಕಾರ್ಮಿಕರ ನಡುವೆ ಅಂತರ ಕಾಯ್ದುಕೊಳ್ಳದೆ ಕೆಲಸ ನಡೆದಿದೆ’ಎಂದು ನಗರದಲ್ಲಿ‌ ಬುಧವಾರ ಸುದ್ದಿಗೋಷ್ಠಿಯಲ್ಲಿ‌ ದೂರಿದರು.

ಪ್ರಕರಣಗಳು ಏರಿಕೆಯಾದ ಬಳಿಕವೂ ವಾಹನಗಳಲ್ಲಿ ಕಾರ್ಮಿಕರನ್ನು ತುಂಬಿಕೊಂಡು ಹೋಗಿ ಕೆಲಸ ಮಾಡಿಸಲಾಗುತ್ತಿದೆಎಂದು ದೂರಿದರು.

ADVERTISEMENT

ಕಾರ್ಖಾನೆಯಲ್ಲಿ ಶಂಕಿತರ ಸೋಂಕು ಪತ್ತೆ ಕಾರ್ಯದ ವೇಗವನ್ನು ತಗ್ಗಿಸಬೇಕು ಎಂದು ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ಜಿಂದಾಲ್‌ ಸೂಚಿಸಿದೆ. ಜನ ಹೇಗಾದರೂ ಸಾಯಲಿ, ಕಾರ್ಖಾನೆಯ ಉತ್ಪಾದನೆ ಮಾತ್ರ ನಿಲ್ಲಬಾರದು ಎಂಬ ದುರಾಲೋಚನೆಯೇ ಅದಕ್ಕೆ ಕಾರಣಎಂದು ಆರೋಪಿಸಿದರು.

‘ಈ ನಡುವೆ ನೂರಾರು ನೌಕರರನ್ನು ಕೆಲಸದಿಂದ ವಿನಾಕಾರಣ ತೆಗೆದು ಹಾಕಲಾಗುತ್ತಿದೆ. ನೌಕಕರಿಂದಲೇ ಬೃಹತ್ ಆಗಿ ಬೆಳೆದಿರುವ ಕಂಪನಿಯು, ಸಂಕಷ್ಟದ ಸಮಯದಲ್ಲಿ ಕೆಲಸದಿಂದ ತೆಗೆದು ಹಾಕುವುದು ಅಮಾನವೀಯ’ಎಂದರು.

ಜಿಂದಾಲ್ ಮೂಲಕ‌ ಸೋ‌ಂಕು ಹಬ್ಬುತ್ತಿರುವುದನ್ನು ತಡೆಯಲು‌ ಜಿಲ್ಲಾಡಳಿತ ಕೂಡಲೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಜನರಲ್ಲಿ ಮೂಡಿರುವ ಆತಂಕವನ್ನು ನಿವಾರಿಸಬೇಕುಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.