ಬೆಂಗಳೂರು: ಪಕ್ಷ ಸಂಘಟನೆ ಮತ್ತು ರಾಜಕೀಯ ಪರಿವರ್ತನೆ ಕುರಿತ ಜನಜಾಗೃತಿಗಾಗಿ ಜನವರಿ 30 ರಿಂದ ಫೆಬ್ರುವರಿ 3ರವರೆಗೆ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ನೇತೃತ್ವದಲ್ಲಿ ನಗರದ ವಿವಿಧೆಡೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಮಹಿಮ ಪಟೇಲ್, ‘ಬೆಂಗಳೂರು ನಗರದಲ್ಲಿ ವಿವಿಧ ಹಂತಗಳಲ್ಲಿ 45 ದಿನಗಳ ಕಾಲ ಪಾದಯಾತ್ರೆ ಮಾಡಲಾಗುವುದು. ಜನ ಕೇಂದ್ರಿತ ರಾಜಕಾರಣ ಮತ್ತು ಸುಸ್ಥಿರ ಬೆಂಗಳೂರು ನಿರ್ಮಾಣಕ್ಕಾಗಿ ಈ ಯಾತ್ರೆ ನಡೆಯಲಿದೆ’ ಎಂದರು.
ಮೊದಲ ದಿನ ಮೆಜೆಸ್ಟಿಕ್ ಅಣ್ಣಮ್ಮ ದೇವಿ ದೇವಸ್ಥಾನದಿಂದ ಪ್ರಾರಂಭಿಸಿ ರಾಜರಾಜೇಶ್ವರಿ ನಗರದವರೆಗೆ ಪಾದಯಾತ್ರೆ ಮಾಡಲಾಗುವುದು. ಜ.31ರಂದು ರಾಜರಾಜೇಶ್ವರಿ ನಗರದಿಂದ ಪೀಣ್ಯ–ದಾಸರಹಳ್ಳಿವರೆಗೆ, ಫೆ.1ರಂದು ದಾಸರಹಳ್ಳಿಯಿಂದ ಯಲಹಂಕದವರೆಗೆ, ಫೆ.2ರಂದು ಯಲಹಂಕದಿಂದ ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್ವರೆಗೆ ಮತ್ತು ಕೊನೆಯ ದಿನವಾದ ಫೆ.3ರಂದು ಮಾನ್ಯತಾ ಟೆಕ್ ಪಾರ್ಕ್ನಿಂದ ಕುಮಾರ ಪಾರ್ಕ್ ಪಶ್ಚಿಮದಲ್ಲಿರುವ ಜೆಡಿಯು ರಾಜ್ಯ ಘಟಕದ ಕಚೇರಿವರೆಗೆ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಜೆಡಿಯು ರಾಜ್ಯ ಮಹಿಳಾ ಘಟಕದ ಸಂಚಾಲಕಿ ಕಲಾವತಿ ಎಂ.ಡಿ., ಬೆಂಗಳೂರು ನಗರ ಘಟಕದ ಅಧ್ಯಕ್ಷ ಬಿ.ಪಿ. ರಮೇಶ್ ಗೌಡ, ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ, ಮುಖಂಡರಾದ ಬೇಹಳ್ಳಿ ನಾಗರಾಜು, ಧನಂಜಯ ಮತ್ತು ಚಂದ್ರಶೇಖರ್ ಗಂಗೂರ್ ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.