ADVERTISEMENT

ಪಠ್ಯಪುಸ್ತಕ ವಿವಾದದಿಂದ ಸಾಂಸ್ಕೃತಿಕ ಲೋಕ ಕಲುಷಿತ: ಟಿ.ಎಸ್. ನಾಗಾಭರಣ ಕಳವಳ

​ಪ್ರಜಾವಾಣಿ ವಾರ್ತೆ
Published 31 ಮೇ 2022, 16:19 IST
Last Updated 31 ಮೇ 2022, 16:19 IST
ಟಿ.ಎಸ್‌. ನಾಗಾಭರಣ 
ಟಿ.ಎಸ್‌. ನಾಗಾಭರಣ    

ಬೆಂಗಳೂರು: ‘ಶಿಕ್ಷಣದಲ್ಲಿ ಕನ್ನಡಕ್ಕೆ ಧಕ್ಕಬೇಕಾದ ಆದ್ಯತೆ ಇನ್ನೂ ದೊರೆತಿಲ್ಲ. ಈ ಸನ್ನಿವೇಶದಲ್ಲಿ ನಾಡಿನ ಪ್ರಜ್ಞಾವಂತರು ಪಠ್ಯಪುಸ್ತಕದ ಬಗ್ಗೆ ಪರ-ವಿರೋಧದ ಬಣಗಳಾಗಿ ಶತ್ರುಗಳಂತೆ ನಡೆದುಕೊಳ್ಳುತ್ತಿರುವುದು ಸಾಂಸ್ಕೃತಿಕ ಲೋಕವನ್ನು ಇನ್ನಷ್ಟು ಕಲುಷಿತಗೊಳಿಸುತ್ತದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಕಳವಳ ವ್ಯಕ್ತಪಡಿಸಿದ್ದಾರೆ.

ಶಾಲಾ ಪಠ್ಯಪುಸ್ತಕದ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಪಠ್ಯವನ್ನು ಅಂತಿಮವಾಗಿ ಗುರಿ ಮುಟ್ಟಿಸುವವರು ಶಿಕ್ಷಕರು. ಇದರ ಪ್ರಯೋಜನಾರ್ಥಿಗಳು ಮಕ್ಕಳು ಮತ್ತು ಪೋಷಕರು. ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಲ್ಲಿ ಇವರ ಪ್ರಾತಿನಿಧ್ಯ ಬಹಳ ಮುಖ್ಯ. ಇದು ಎಲ್ಲರ ಅರಿವಿನಲ್ಲಿರಬೇಕು. ವಿವಾದಗಳಿಂದಾಗಿ ಕನ್ನಡ ಭಾಷೆ ಹಾಗೂ ವಿದ್ಯಾರ್ಥಿ ಮತ್ತು ಪೋಷಕರು ಬಡವಾಗುತ್ತಿದ್ದಾರೆ. ‌ಈ ಕಲುಷಿತ ವಾತಾವರಣವನ್ನು ತಿಳಿಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.

‘ಪರಿಷ್ಕೃತ ಪಠ್ಯದ ಚರ್ಚೆ ವಿದ್ಯಾರ್ಥಿಗಳ, ಕನ್ನಡ ಶಾಲೆಗಳ ಭವಿಷ್ಯಕ್ಕೆ ಚ್ಯುತಿ ತರಬಾರದು. ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ ಕನ್ನಡ ಪಠ್ಯಪುಸ್ತಕದಲ್ಲಿಯೂ ಕನ್ನಡ ಕಲಿಸುವ ಉದ್ದೇಶ ಇಟ್ಟುಕೊಳ್ಳದಿರುವುದು ಆತಂಕಕಾರಿ. ಕನ್ನಡ ಪಠ್ಯಕ್ರಮದಲ್ಲಿ ಕನ್ನಡ ಕಲಿಸುತ್ತಿಲ್ಲ. ಸ್ವಾತಂತ್ರ್ಯ ಹೋರಾಟ, ಮಹಾನ್ ವ್ಯಕ್ತಿಗಳು, ಪ್ರೇಕ್ಷಣಿಯ ಸ್ಥಳಗಳು, ನೀತಿ ಪಾಠಗಳು, ಪ್ರಬಂಧ, ಕಥೆ, ನಾಟಕ, ಗದ್ಯ ಮತ್ತು ಹಲವಾರು ಪದ್ಯಗಳು ಕನ್ನಡ ಪಠ್ಯಕ್ರಮದಲ್ಲಿರುತ್ತವೆ. ಹೀಗಾದರೆ ಕನ್ನಡ ಭಾಷೆಯನ್ನು ಕಲಿಯುವುದು ಯಾವಾಗ ಮತ್ತು ಎಲ್ಲಿ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.