ಬೆಂಗಳೂರು: ‘ಕಣಜ ಕನ್ನಡ ಜಾಲತಾಣಕ್ಕೆ ಕಾಯಕಲ್ಪ, ಜಾಗತಿಕ ತಂತ್ರಜ್ಞಾನ ವೇದಿಕೆಗಳಲ್ಲಿ ರಾಜ್ಯ ಸರ್ಕಾರದ ಅಧಿಕೃತ ಸದಸ್ಯತ್ವ ಅಭಿಯಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಕನ್ನಡ ಕಾಯಕ ವರ್ಷಾಚರಣೆಯನ್ನು ಪರಿಣಾಮಕಾರಿಯಾಗಿ ಆಚರಿಸಲಾಗುವುದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಭರವಸೆ ನೀಡಿದರು.
ನಗರದಲ್ಲಿ ಗುರುವಾರ ನಡೆದಕಾರ್ಯಕ್ರಮದಲ್ಲಿ ಕನ್ನಡ ಕಾಯಕ ವರ್ಷಾಚರಣೆ ಲಾಂಛನ ಬಿಡುಗಡೆ ಗೊಳಿಸಿ ಮಾತನಾಡಿದರು.
‘ಕನ್ನಡ ಭಾಷಾ ಬೆಳವಣಿಗೆಯ ಹಿತದೃಷ್ಟಿಯಿಂದ ಆಡಳಿತ, ಶಿಕ್ಷಣ, ತಂತ್ರಜ್ಞಾನ, ನ್ಯಾಯಾಂಗ ಹಾಗೂ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಲಿಪಿಯಲ್ಲೇ ಇ-ಮೇಲ್ ಸೇವೆಯನ್ನು ಎಲ್ಲ ಕನ್ನಡಿಗರಿಗೆ ನೀಡುವ ಸದುದ್ದೇಶದಿಂದ ಸರ್ಕಾರವು ಈಗಿರುವ ‘ಭಾರತ್’ (ಡಾಟ್ಭಾರತ್) ಸೇವೆ ಬಳಸಿಕೊಳ್ಳಬೇಕು. ಆಗ ಎಲ್ಲ ಜಾಲತಾಣಗಳನ್ನು ಕನ್ನಡಕ್ಕೆ ಬದಲಾಯಿಸಿದರೆ ಕನ್ನಡದಲ್ಲೇ ಇ-ಮೇಲ್ ಸೇವೆಯನ್ನೂ ನೀಡಬಹುದು’ ಎಂದರು.
‘ಪ್ರಾಯೋಗಿಕವಾಗಿ ಪ್ರಾಧಿಕಾರದಿಂದಲೇ ಕರ್ನಾಟಕ ನಾಡಿನ ಚರಿತ್ರೆ ಮತ್ತು ಸಂಸ್ಕೃತಿ ಬಿಂಬಿಸುವ ಕಿರುಹೊತ್ತಿಗೆಗಳನ್ನು ಪ್ರಕಟಿಸಲಾಗುವುದು. ‘ಹಾಡಬನ್ನಿ-ನೋಡಬನ್ನಿ’ ಕಾರ್ಯಕ್ರಮದ ಮೂಲಕ 10 ಕಿರುಚಿತ್ರ ಮತ್ತು ಹಾಡುಗಳಿಗೆ ವರ್ಷಾಂತ್ಯಕ್ಕೆ ಪ್ರಶಸ್ತಿ ನೀಡಲಾಗುವುದು. ವಿವಿಧ ಗಣ್ಯರಿಂದ ನಾಡಿನ ಮಕ್ಕಳಿಗೆ ಉದ್ಯೋಗ ಪೂರ್ವ ಯೂಟ್ಯೂಬ್ ತರಬೇತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.