ADVERTISEMENT

ಯುಟ್ಯೂಬ್‌, ಪಾಡ್‌ಕಾಸ್ಟ್‌ಗಳ ಮೂಲಕ ಸಂವಾದ: ನವ ಮಾಧ್ಯಮದತ್ತ ಕಥನ ಲೋಕ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 0:02 IST
Last Updated 17 ಆಗಸ್ಟ್ 2025, 0:02 IST
ಕಥನ ಸ್ಟುಡಿಯೊವಿನ ‘ನೂರು ಮರ–ನೂರು ಸ್ವರ’ ಉಪನ್ಯಾಸ ಮಾಲೆಯ ಪೋಸ್ಟರ್‌
ಕಥನ ಸ್ಟುಡಿಯೊವಿನ ‘ನೂರು ಮರ–ನೂರು ಸ್ವರ’ ಉಪನ್ಯಾಸ ಮಾಲೆಯ ಪೋಸ್ಟರ್‌   

ಬೆಂಗಳೂರು: ಸಾಹಿತ್ಯ ಸಂವಾದ, ಉಪನ್ಯಾಸ, ಚರ್ಚೆಗಳಿಗೆ ಖುದ್ದು ಹಾಜರಾಗಿ ಅವುಗಳ ಭಾಗವೇ ಆಗುವ ಅಂದವೇ ಬೇರೆ. ಐದಾರು ದಶಕ ಅಥವಾ ಅದಕ್ಕಿಂತಲೂ ಹೆಚ್ಚಿನ ಅವಧಿಯಿಂದ ಚಾಲ್ತಿಯಲ್ಲಿರುವ ಈ ರೂಢಿಯನ್ನು, ವರ್ತಮಾನದ ಅಗತ್ಯಕ್ಕೆ ತಕ್ಕಂತೆ ಒಗ್ಗಿಸುವ ಯತ್ನಕ್ಕೆ ಕನ್ನಡ ಸಾರಸ್ವತ ಲೋಕ ತೆರೆದುಕೊಳ್ಳುತ್ತಿದೆ.

ಬೆರಳ ತುದಿಯಲ್ಲಿಯೇ ಜಗತ್ತಿನ ಆಗುಹೋಗುಗಳನ್ನೆಲ್ಲಾ ಜಾಲಾಡಿ ಬಿಡುವ ಈ ಹೊತ್ತಿನ ಹೊಸ ಸಾಧ್ಯತೆ
ಗಳಿಗೆ ಕನ್ನಡದ ಸಾಹಿತಿ–ವಿಮರ್ಶಕರೂ ಅಡಿ ಇಡತೊಡಗಿದ್ದಾರೆ. ಯುಟ್ಯೂಬ್‌, ಪಾಡ್‌ಕಾಸ್ಟ್‌ಗಳ ಮೂಲಕ ಸಂವಾದ ನಡೆಸುವ, ಉಪನ್ಯಾಸ ನೀಡುವ, ವಿಮರ್ಶೆ ಮಾಡುವ ಈ ಹೊತ್ತಿನ ಪ್ರಯತ್ನಕ್ಕೆ ಕನ್ನಡದ ಸಾಹಿತಿ–ವಿಮರ್ಶಕರು ಕೈಇರಿಸಿದ್ದಾರೆ.

ಕನ್ನಡದ ಕೆಲ ಸಾಹಿತ್ಯಾಸಕ್ತರು ನಡೆಸುತ್ತಿರುವ ಕಥನ ಸ್ಟುಡಿಯೊ ಎಂಬ ಯೂಟ್ಯೂಬ್‌ ವಾಹಿನಿ ಇದಕ್ಕೊಂದು ನಿದರ್ಶನ. ಕನ್ನಡದ ಸಾಹಿತಿ–ವಿಮರ್ಶಕರನ್ನು ಕೂರಿಸಿ, ಕನ್ನಡ ಸಾಹಿತ್ಯದ ಪ್ರಮುಖ ಕೃತಿ–ಘಟ್ಟಗಳ ಬಗ್ಗೆ ಮಾತನಾಡಿಸುವ ಕೆಲಸವನ್ನು ಕಥನ ಸ್ಟುಡಿಯೊ ಬಳಗ ಮಾಡುತ್ತಿದೆ.

ADVERTISEMENT

ವಿಮರ್ಶಕ ರಹಮತ್ ತರೀಕೆರೆ ಅವರೊಂದಿಗೆ ಎರಡು ವರ್ಷಗಳ ಹಿಂದೆ ನಡೆಸಿದ್ದ ಸಂವಾದದ ಎರಡು ಭಾಗಗಳು ಕಥನ ಸ್ಟುಡಿಯೊ ವಾಹಿನಿಯಲ್ಲಿ ಲಭ್ಯವಿವೆ. ತಮ್ಮ ಬಾಲ್ಯ, ಅಪ್ಪ–ಅಮ್ಮ, ತಾವು ಬೆಳೆದ ಪರಿಸರದ ಜತೆಗೆ ಈ ಹೊತ್ತಿನ ಸಾಹಿತ್ಯ ಲೋಕದ ದಿಕ್ಕು–ದೆಸೆಗಳ ಬಗ್ಗೆ ರಹಮತ್‌ ತರೀಕೆರೆ ಅವರ ಮಾತುಗಳನ್ನು ಒಳಗೊಂಡ ಈ ವಿಡಿಯೊಗಳು ಈವರೆಗೆ ಆರು ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿವೆ.

ಈಗ್ಗೆ ತಿಂಗಳ ಹಿಂದಿನಿಂದ ಮತ್ತೆ ಅಂಥದ್ದೊಂದು ಪ್ರಯತ್ನಕ್ಕೆ ಕಥನ ಸ್ಟುಡಿಯೊ ಚಾಲನೆ ನೀಡಿದ್ದು, ಹೊಸದಾಗಿ ಎಂಟು ವಿಡಿಯೊಗಳನ್ನು ಕನ್ನಡದ ಓದುಗರಿಗೆ ತೆರೆದಿಟ್ಟಿದೆ. ಆಧುನಿಕ ಕನ್ನಡ ಸಾಹಿತ್ಯದ ನವ್ಯ ಕಾಲಘಟ್ಟದಲ್ಲಿ ಗುರುತಿಸಿಕೊಂಡಿದ್ದ ಲೇಖಕಿ ರಾಜಲಕ್ಷ್ಮಿ ಎನ್‌. ರಾವ್ ಅವರೊಂದಿಗಿನ ಸಂವಾದದ ಎರಡು ಕಂತುಗಳನ್ನು ಬಿತ್ತರಿಸಿದೆ.

‘ನೂರು ಮರ–ನೂರು ಸ್ವರ’
ಸಾಹಿತಿಗಳು ಮತ್ತು ಕೃತಿಗಳ ಕುರಿತು ವಿಮರ್ಶಕ ಎಚ್‌.ಎಸ್‌.ರಾಘವೇಂದ್ರ ರಾವ್ ಅವರ ಉಪನ್ಯಾಸ ಇರುವ ‘ನೂರು ಮರ–ನೂರು ಸ್ವರ’ ವಿಡಿಯೊ ಸರಣಿಯನ್ನು ಕಥನ ಸ್ಟುಡಿಯೊ ಆರಂಭಿಸಿದೆ. ಈ ಸರಣಿಯಲ್ಲಿ ಈವರೆಗೆ ಆರು ವಿಡಿಯೊಗಳು ರೂಪುಗೊಂಡಿವೆ. ಆಧುನಿಕ ಕನ್ನಡ ಸಾಹಿತ್ಯ ಈ ಹೊತ್ತಿನ ಸಾಹಿತ್ಯ ಮತ್ತು ಕುವೆಂಪು ಅವರ ಬದುಕು ಬರಹಗಳ ಬಗ್ಗೆ ಎಚ್ಚೆಸ್ಸಾರ್ ಅವರು ನೀಡಿರುವ ಉಪನ್ಯಾಸಗಳನ್ನು 10 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ. ‘ಕುವೆಂಪು ಶಿವರಾಮ ಕಾರಂತ ಬೇಂದ್ರೆ ಮಾಸ್ತಿ ಪುತಿನ ಕೆಎಸ್‌ನ ಮಧುರ ಚೆನ್ನ ಗೋಪಾಲಕೃಷ್ಣ ಅಡಿಗ ಯು.ಆರ್.ಅನಂತಮೂರ್ತಿ ಪಿ.ಲಂಕೇಶ್ ಪೂರ್ಣಚಂದ್ರ ತೇಜಸ್ವಿ ಯಶವಂತ ಚಿತ್ತಾಲ ದೇವನೂರ ಮಹಾದೇವರಂತಹ ಲೇಖಕರು ನವೋದಯ ನವ್ಯ ಬಂಡಾಯ ದಲಿತ ಮತ್ತು ಮಹಿಳಾ ಸಾಹಿತ್ಯ ರಂಗಭೂಮಿ ಮತ್ತು ವಿಮರ್ಶೆಗಳ ಕುರಿತಾದ ಉಪನಾಸ್ಯಗಳ ವಿಡಿಯೊವನ್ನು ವಾರಕ್ಕೊಂದರಂತೆ ಈ ಸರಣಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ’ ಎನ್ನುತ್ತಾರೆ ಕಥನ ಸ್ಟುಡಿಯೊ ರೂವಾರಿ ಚಂದನ್‌ ಗೌಡ.
ಅಲೆಮಾರಿಯ ಕತೆಗಳು...
ವಿಮರ್ಶಕ ರಹಮತ್ ತರೀಕೆರೆ ಅವರು ತಾವು ರಾಜ್ಯ ದೇಶ ವಿದೇಶಗಳ ಪ್ರವಾಸಿ ತಾಣಗಳಿಗೆ ನೀಡಿದ ಭೇಟಿ ಮತ್ತು ನಡೆಸಿದ ಚಾರಣಗಳ ಕಥನಗಳನ್ನು ಕಟ್ಟಿಕೊಡುವ ‘ಅಲೆಮಾರಿಯ ಕತೆಗಳು’ ವಿಡಿಯೊ ಸರಣಿಯನ್ನು ಈದಿನ.ಕಾಂ ತನ್ನ ಯೂಟ್ಯೂಬ್‌ ವಾಹಿನಿಯಲ್ಲಿ ಬಿಡುಗಡೆ ಮಾಡುತ್ತಿದೆ. ಹಿಮಚ್ಛಾದಿತ ಕುಲು–ಮನಾಲಿ ಲಡಾಖ್‌ನ ಹಿಮ ಮರುಭೂಮಿಯ ಪ್ಯಾಂಗಾಂಗ್‌ ಸರೋವರ ಕ್ರೈಸ್ತ–ಇಸ್ಲಾಂ–ಯಹೂದಿ ಧರ್ಮಗಳಿಗೆ ಪ್ರಮುಖವಾದ ಸಿನಾಯಿ ಪರ್ವತ ಕಾವೇರಿ ಹರಿದುಹೋಗುವ ನಾಡುಗಳುದ್ದಕ್ಕೂ ಕೈಗೊಂಡ ಪಯಣದ ಬಗ್ಗೆ ರಹಮತ್ ಅವರು ಕಟ್ಟಿಕೊಟ್ಟ ಚಿತ್ರಣದ ವಿಡಿಯೊಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಕರ್ನಾಟಕದ ದಾರ್ಶನಿಕ ಪಂಥಗಳ ಬಗ್ಗೆ ಅವರ ವಿಶ್ಲೇಷಣಾ ವಿಡಿಯೊಗಳು 20 ಸಾವಿರದಷ್ಟು ವೀಕ್ಷಣೆಗಳನ್ನು ದಾಖಲಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.