ADVERTISEMENT

ಬರಗೂರ ರಾಮಚಂದ್ರಪ್ಪ ಅವರ ಪತ್ರ ಬೇಸರ ತರಿಸಿದೆ: ಕಸಾಪ ಅಧ್ಯಕ್ಷ ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 20:45 IST
Last Updated 9 ಫೆಬ್ರುವರಿ 2022, 20:45 IST
ಮಹೇಶ ಜೋಶಿ
ಮಹೇಶ ಜೋಶಿ   

ಬೆಂಗಳೂರು: ‘ಭವಿಷ್ಯದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸುವುದರತ್ತ ಗಮನ ಕೇಂದ್ರೀಕರಿಸುವ ಬದಲು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಬೈ–ಲಾ ತಿದ್ದುಪಡಿಗೆ ಏಕಿಷ್ಟು ಆತುರ ತೋರುತ್ತಿದ್ದೀರಿ ಎಂದು ಪ್ರಶ್ನಿಸಿ ಸಾಹಿತಿ ಬರಗೂರು ರಾಮಚಂದ್ರಪ್ಪ ಬರೆದಿರುವ ಪತ್ರ ಬೇಸರ ತರಿಸಿದೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ.

ಈ ಸಂಬಂಧ ಬರಗೂರರಿಗೆ ಪತ್ರ ಬರೆದಿರುವ ಅವರು, ‘ಬೈ–ಲಾ ತಿದ್ದುಪಡಿಯ ಹಿನ್ನೆಲೆ ಸರಿಯಾಗಿ ತಿಳಿದುಕೊಳ್ಳದೆ ಬೇರೊಬ್ಬರ ಮಾತುಗಳನ್ನು ಕೇಳಿಕೊಂಡು ಪೂರ್ವಗ್ರಹ ಪೀಡಿತರಾಗಿ ತಾವು ಪತ್ರ ಬರೆದಿದ್ದೀರಿ. ಅದರಿಂದ ಮನಸ್ಸಿಗೆ ನೋವಾಗಿದೆ’ ಎಂದಿದ್ದಾರೆ.

‘ಕಸಾಪವನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ಉದ್ದೇಶದಿಂದ ರಾಜ್ಯದ 252 ತಾಲ್ಲೂಕುಗಳಿಗೆ ಭೇಟಿ ನೀಡಿದ್ದೇನೆ. ಜನರ ಆಶಯದಂತೆ ಪರಿಷತ್ತಿನ ಆಜೀವ ಸದಸ್ಯತ್ವ ಶುಲ್ಕವನ್ನು ₹500 ರಿಂದ ₹250ಕ್ಕೆ ಇಳಿಸಲು ನಿರ್ಧರಿಸಿದ್ದೇನೆ. ಆ್ಯಪ್‌ ಮೂಲಕ ಸದಸ್ಯತ್ವ ನೋಂದಣಿ ಮಾಡಲು ಚಿಂತಿಸಲಾಗಿದೆ. ಈ ಉದ್ದೇಶಗಳ ಈಡೇರಿಕೆಗೆ ಬೈ–ಲಾ ತಿದ್ದುಪಡಿ ಅನಿವಾರ್ಯ. ಕಸಾಪ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಡಾ.ಚನ್ನಬಸವ ಪಟ್ಟದೇವರ ಜಯಂತಿಯನ್ನು ಎಲ್ಲ ಜಿಲ್ಲೆಗಳಲ್ಲೂ ಆಚರಿಸುವಂತೆ ಆದೇಶಿಸಿದ್ದೇನೆ. ಆ ಮೂಲಕ ಕನ್ನಡಕ್ಕೆ ಅವರು ನೀಡಿದ ಕೊಡುಗೆ ಸ್ಮರಿಸುವ ಕೆಲಸ ಮಾಡಿದ್ದೇನೆ. ಇದನ್ನು ಅರಿಯದೆ ನಾನು ಯಾವ ಕಾರ್ಯಕ್ರಮವನ್ನೂ ಮಾಡಿಲ್ಲ ಎಂದು ಆರೋಪಿಸಿದ್ದೀರಿ. ಇದು ನಿಮಗೆ ಶೋಭೆ ತರುವುದಿಲ್ಲ’ ಎಂದು ಟೀಕಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.