ADVERTISEMENT

‘ಕನ್ನಡ ತಂತ್ರಾಂಶ ಸಲಹಾ ಸಮಿತಿ’ ವರದಿ ಸಂಪೂರ್ಣ ಅನುಷ್ಠಾನವಾಗಲಿ

ಕಸಾಪ ಅಧ್ಯಕ್ಷ ಮನು ಬಳಿಗಾರ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 11:11 IST
Last Updated 22 ಆಗಸ್ಟ್ 2019, 11:11 IST

ಬೆಳಗಾವಿ: ‘ಪ್ರಸಕ್ತ ದಿನಗಳಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಕನ್ನಡ ತಂತ್ರಾಂಶ ಅಭಿವೃದ್ಧಿ ಬಹಳ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ, ಕನ್ನಡ ತಂತ್ರಾಂಶ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಶಿಫಾರಸುಗಳನ್ನು ಸಂಪೂರ್ಣ ಅನುಷ್ಠಾನಕ್ಕೆ ‌ತರಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ ಹೇಳಿದರು.

ಇಲ್ಲಿನ ವಿಟಿಯುನಲ್ಲಿ ಗುರುವಾರ ‘ಜನಪ್ರಿಯ ತಾಂತ್ರಿಕ ಶಿಕ್ಷಣ ಮಾಲೆ’ಯ 3ನೇ ಸರಣಿಯ ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸಮಿತಿಯು 2010ರಲ್ಲೇ ಸರ್ಕಾರಕ್ಕೆ ವರದಿ ಕೊಟ್ಟಿದೆ. ಅದರಲ್ಲಿ ಶೇ 50ರಷ್ಟು ಶಿಫಾರಸುಗಳು ಅನುಷ್ಠಾನವಾಗಿವೆ. ಉಳಿದದ್ದು ಆಗಬೇಕಾಗಿದೆ. ಈ ದಿಸೆಯಲ್ಲಿ ವಿಟಿಯು ಕುಲಪತಿ ಆ ವರದಿ ಪಡೆದು ಮುಂದೆ ಮಾಡಬಹುದಾದ ಕ್ರಮಗಳ ಕುರಿತು ಸರ್ಕಾರಕ್ಕೆ ಮಾರ್ಗದರ್ಶನ ನೀಡಬೇಕು ಮತ್ತು ತಂತ್ರಾಂಶಗಳ ಅಭಿವೃದ್ಧಿಗೆ ಮುಂದಾಳತ್ವ ವಹಿಸಿಕೊಳ್ಳಬೇಕು. ಪರಿಷತ್ತಿನಿಂದ ಸಂಪೂರ್ಣ ಸಹಕಾರ ನೀಡಲಾಗುವುದು’ ಎಂದರು.

ADVERTISEMENT

‘ಪರಿಷತ್ತಿನ ಸಿಬ್ಬಂದಿಗೆ ಸಂಬಳ ಬಹಳ ಕಡಿಮೆ ಇತ್ತು. ನಾನು ಬಂದ ಮೇಲೆ ಎರಡು ಪಟ್ಟು ಹೆಚ್ಚಿಸಿದ್ದೇನೆ. ಪರಿಷತ್ತಿನ ಸಿಬ್ಬಂದಿಯ ಮಕ್ಕಳಿಗೆ ವಿಟಿಯು ಮಾದರಿಯಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಪ್ರವಾಹ ಪರಿಸ್ಥಿತಿ ಸುಧಾರಿಸಿದ ಬಳಿಕ ಕಲಬುರ್ಗಿಯಲ್ಲಿ ನಡೆಸಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಾಂತ್ರಿಕ ವಿಷಯದ ಬಗ್ಗೆ ಗೋಷ್ಠಿ ಆಯೋಜಿಸಲಾಗುವುದು’ ಎಂದು ಪ್ರಕಟಿಸಿದರು.

ಕುಲಪತಿ ಡಾ.ಕರಿಸಿದ್ದಪ್ಪ ಮಾತನಾಡಿ, ‘ತಾಂತ್ರಿಕ ಶಬ್ದಗಳಿಗೆ ಕನ್ನಡದ ಶಬ್ದ, ಅರ್ಥ ತಿಳಿಸುವ ಶಬ್ದಕೋಶ ಹಾಗೂ ಮೊಬೈಲ್ ಆ್ಯಪ್‌ ಸಿದ್ಧಪಡಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.