ಹರಿಹರ: ಕನ್ನಡದ ಅಕ್ಷರ ಮಾಲೆ, ಕನ್ನಡದ ವ್ಯಾಕರಣ, ಕನ್ನಡದ ಸಂಖ್ಯೆ, ವಾರದ ದಿನಗಳು, ತಿಂಗಳ ಹೆಸರು, ಶ್ಲೋಕಗಳು, ಭಾರತೀಯ ಹಬ್ಬ-ಹರಿದಿನಗಳ ಮಹತ್ವವನ್ನು ಹಂತ, ಹಂತವಾಗಿ ಮಕ್ಕಳಿಗೆ ಹೇಳಿಕೊಡುವ ಪರಿಪಾಠ ಪ್ರಣವ ವಿದ್ಯಾ ಪ್ರತಿಷ್ಠಾನ ಮಾಡಿಕೊಂಡು ಬರುತ್ತಿದೆ ಎಂದು ಪ್ರಣವ ವಿದ್ಯಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಛಾಯಾಪತಿ ಮಿರ್ಲೆ ಹೇಳಿದ್ದಾರೆ.
ಜೂನ್ ತಿಂಗಳಲ್ಲಿ ಅಮೇರಿಕದ ಮಿಚಿಗನ್ ರಾಜ್ಯದ ಟ್ರಾಯ್ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರಣವ ವಿದ್ಯಾ ಪ್ರತಿಷ್ಠಾನದ 32ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಕೋವಿಡ್ ಮೊದಲು ಮನೆಯಲ್ಲೇ ತರಗತಿಗಳನ್ನು ನಡೆಸಲಾಗುತ್ತಿತ್ತು. ಈಗ ಆನ್ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಂಡಿದ್ದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಹರಿಹರದ ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ ಮಾತನಾಡಿ, ‘ಕನ್ನಡಿಗರು ಉದ್ಯೋಗಕ್ಕಾಗಿ ವಿದೇಶಕ್ಕೂ ಬಂದಿದ್ದರು ಸಹ ತಮ್ಮ ಕಾಯಕದ ಬಿಡುವಿನ ವೇಳೆಯಲ್ಲಿ ತಾಯಿ ನಾಡಿನ ನುಡಿಯ ಸೇವೆ ಮಾಡುತ್ತಾ, ವಿದೇಶದಲ್ಲೂ ಸ್ವದೇಶಿ ಸಂಸ್ಕೃತಿ ಸಂಸ್ಕಾರವನ್ನು ಜಗತ್ತಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ. ಪ್ರಣವ ವಿದ್ಯಾ ಪ್ರತಿಷ್ಠಾನದ ಶಿಕ್ಷಕ ವೃಂದವು ಉಚಿತವಾಗಿ ಮಕ್ಕಳಿಗೆ ಕನ್ನಡ ವಿದ್ಯಾಭ್ಯಾಸ ನೀಡುತ್ತಿರುವುದು ಕನ್ನಡಾಂಬೆಯ ಸೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ. ವಾಮದೇವಪ್ಪ ಮಾತನಾಡಿ, ‘ವಿದೇಶದಲ್ಲಿರುವ ಪ್ರಣವ ವಿದ್ಯಾ ಪ್ರತಿಷ್ಠಾನದ ಕಾರ್ಯಯನ್ನು ಪ್ರಶಂಸಿಸಿ, ಶುಭ ಸಂದೇಶ ಕಳಿಸಿದ್ದಾರೆ
ಈ ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದ ಕುಮಾರಸ್ವಾಮಿ, ರವಿಕೊನನೂರ್, ರವಿಶಂಕರ್, ಪ್ರಕಾಶ್ ಕುಲಕರ್ಣಿ, ಶಿಲ್ಪಾ ಪ್ರಭುಸ್ವಾಮಿ, ಅಶ್ವಿನಿ ಮೋಹನ್, ವಿ.ಜಿ. ಸಿದ್ದಯ್ಯ, ನವೀನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.