
ವಿಧಾನಸೌಧ
ಬೆಂಗಳೂರು: ಖಾಸಗಿ ಉದ್ಯಮ ಮತ್ತು ಸಂಸ್ಥೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಉದ್ದೇಶದ ಮಸೂದೆ ಅಂತಿಮಗೊಂಡಿದೆ.
ಯಾವುದೇ ಕಂಪನಿಯ ಆಡಳಿತಾತ್ಮಕ ಹುದ್ದೆಗಳ ಪೈಕಿ ಶೇ 50 ರಷ್ಟು, ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ 75 ರಷ್ಟು ಮೀಸಲಾತಿ ನೀಡಲು ಈ ಮಸೂದೆ ರೂಪಿಸಲಾಗಿದೆ. ಈ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಮಸೂದೆಯ ಕುರಿತು ಸಚಿವರ ಮಧ್ಯೆ ಒಮ್ಮತ ಮೂಡದ ಕಾರಣ ತಡೆ ಹಿಡಿಯಲಾಗಿತ್ತು.
‘ಈ ಮಸೂದೆಯ ಬಗ್ಗೆ ಇನ್ನಷ್ಟು ವಿಸ್ತೃತ ಚರ್ಚೆ ನಡೆಯಬೇಕಾಗಿದ್ದ ಕಾರಣ ತಡೆ ಹಿಡಿಯಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಮಸೂದೆಗಳ ವಿಚಾರದಲ್ಲಿ ಸಚಿವರ ಮಧ್ಯೆ ಸಮನ್ವಯಕ್ಕಾಗಿ ಸಮಿತಿಯನ್ನೂ ರಚಿಸಲಾಗಿತ್ತು. ಮಸೂದೆಯಲ್ಲಿ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಲಾಗಿದೆ. ಸದ್ಯವೇ ಸಚಿವ ಸಂಪುಟ ಸಭೆ ಒಪ್ಪಿಗೆಗೆ ಮಂಡಿಸಲಾಗುವುದು ಎಂದು ಮೂಲಗಳು ಹೇಳಿವೆ.
ಹಳೆ ಮಸೂದೆಯಲ್ಲೇನಿದೆ:
ಖಾಸಗಿ ಉದ್ಯಮ ಮತ್ತು ಸಂಸ್ಥೆಯು ನಿಗದಿಪಡಿಸಿದ ಶೇಕಡವಾರು ಪ್ರಮಾಣದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡದಿದ್ದರೆ ಅಥವಾ ಅದಕ್ಕಿಂತ ಕಡಿಮೆ ಮೀಸಲಾತಿ ನೀಡಿದ್ದರೆ ಅಂತಹ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಭೂಮಿ, ತೆರಿಗೆ ರಿಯಾಯಿತಿ ಅಥವಾ ತೆರಿಗೆಯ ಮುಂದೂಡಿಕೆ, ಸಹಾಯಧನ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಅರ್ಹರಿರುವುದಿಲ್ಲ.
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಸರ್ಕಾರಕ್ಕೆ ಲಿಖಿತ ಭರವಸೆ ನೀಡಿಯೂ ಆ ಪ್ರಕಾರ ನಡೆದುಕೊಳ್ಳದ ಉದ್ಯಮಗಳಿಗೆ ಸರ್ಕಾರ ನೀಡಿದ್ದ ತೆರಿಗೆ ರಿಯಾಯಿತಿ ಅಥವಾ ತೆರಿಗೆಯ ಮುಂದೂಡಿಕೆ, ಸಹಾಯಧನ ಮತ್ತು ಇತರ ಸೌಲಭ್ಯಗಳನ್ನು ಮುಂದುವರಿಸಬಾರದು. ದಂಡ ವಿಧಿಸಬಹುದು ಎಂಬ ಅಂಶವನ್ನೂ ಸೇರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.