ADVERTISEMENT

ಆತ್ಮಸಾಕ್ಷಿಯಂತೆ ನಡೆಯುವುದು ಕಷ್ಟದ ಕೆಲಸ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 21:00 IST
Last Updated 27 ಅಕ್ಟೋಬರ್ 2022, 21:00 IST
ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. ಹುಣಸವಾಡಿ ರಾಜನ್, ಅಭಿಮಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಟಿ.ವೆಂಕಟೇಶ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ, ಪಿ.ರಾಮಯ್ಯ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಇದ್ದರು  –ಪ್ರಜಾವಾಣಿ ಚಿತ್ರ
ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. ಹುಣಸವಾಡಿ ರಾಜನ್, ಅಭಿಮಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಟಿ.ವೆಂಕಟೇಶ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ, ಪಿ.ರಾಮಯ್ಯ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಆತ್ಮಸಾಕ್ಷಿಗೆ ಅನು ಗುಣವಾಗಿ ನಡೆಯುವುದು ಬಹಳ ಕಷ್ಟದ ಕೆಲಸ. ಅದಕ್ಕೆ ವಿಘ್ನಗಳು ಎದುರಾಗುತ್ತಲೇ ಇರುತ್ತವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಭಿಮಾನಿ ಪ್ರಕಾಶನ ಪ್ರಕಟಿಸಿರುವ ಪತ್ರಕರ್ತ ಪಿ.ರಾಮಯ್ಯ ಅವರ 60 ವರ್ಷಗಳ ಅನುಭವ ಕಥನ ‘ನಾನು ಹಿಂದೂ ರಾಮಯ್ಯ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಆತ್ಮಸಾಕ್ಷಿಯಂತೆ ನಡೆದುಕೊಳ್ಳಲು ಒಂದಿಲ್ಲೊಂದು ಒತ್ತಡಗಳು ಅಡ್ಡಿಯಾಗುತ್ತಲೇ ಇರುತ್ತವೆ. ಆತ್ಮಸಾಕ್ಷಿಯಂತೆ ನಡೆದುಕೊಳ್ಳಲಿಲ್ಲ ಎಂಬ ಸಂಕಟ ಕಾಡುತ್ತಲೇ ಇರುತ್ತವೆ’
ಎಂದರು.

‘ಪಿ.ರಾಮಯ್ಯ ಅವರು ಆತ್ಮಸಾಕ್ಷಿಗೆ ವಂಚನೆ ಮಾಡಿಕೊಳ್ಳದೆ ನೈಜ ಪತ್ರಕರ್ತನಾಗಿ ಕೆಲಸ ಮಾಡಿದ್ದಾರೆ. ರಾಮಯ್ಯ ಅವರನ್ನು ಬಾಲ್ಯದಿಂದ ನೋಡಿ ಬೆಳೆದಿದ್ದೇನೆ. ಅವರಿಂದ ಬಹಳಷ್ಟು ಕಲಿತಿದ್ದೇನೆ. ನನ್ನ ತಂದೆ ಜತೆಗೂ ಸಾಕಷ್ಟ ಒಡನಾಟ ಇಟ್ಟುಕೊಂಡಿದ್ದರು. ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಜೆ.ಎಚ್‌.ಪಟೇಲ್ ಸೇರಿ ಎರಡು ತಲೆಮಾರಿನ ರಾಜಕಾರಣ ಮತ್ತು ಮೂರು ತಲೆಮಾರಿನ ಪತ್ರಿಕೋದ್ಯಮವನ್ನು ಅವರು ನೋಡಿದ್ದಾರೆ. ಅವರ ಬದುಕು ಇತರರಿಗೆ ಸ್ಫೂರ್ತಿ’ ಎಂದು ಹೇಳಿದರು.

ADVERTISEMENT

ಕೃತಿ ಕುರಿತು ಮಾತನಾಡಿದ ‘ಸಂಯುಕ್ತ ಕರ್ನಾಟಕ’ ಪತ್ರಿಕೆ ಪ್ರಧಾನ ಸಂಪಾದಕ ಹುಣಸವಾಡಿ ರಾಜನ್ ಮಾತನಾಡಿ, ‘ದೇವರಾಜ ಅರಸು ಅವರೊಂದಿಗಿನ ಅನುಭವವನ್ನು ಪಿ.ರಾಮಯ್ಯ ಅವರು ಸಮಗ್ರ ದೃಷ್ಟಿಯಿಂದ ಚಿತ್ರಿಸಿದ್ದಾರೆ. ಎಚ್‌.ಡಿ. ದೇವೇಗೌಡರ ಜೊತೆಗಿನ ಒಡನಾಟವನ್ನೂ ಸುದೀರ್ಘವಾಗಿ ಉಲ್ಲೇಖಿಸಿದ್ದಾರೆ’ ಎಂದರು.

ಪಿ.ರಾಮಯ್ಯ ಮಾತನಾಡಿ,‘ಪತ್ರಕರ್ತನಾಗಿ ಕೆಲಸ ಮಾಡಿದ 45 ವರ್ಷಗಳ ಅವಧಿಯಲ್ಲಿ ಎಲ್ಲಾ ವರ್ಗದವರ ಪ್ರೀತಿ ಗಳಿಸಿರುವುದೇ ನನ್ನ ದೊಡ್ಡ ಆಸ್ತಿ’ ಎಂದುಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.