ಕಾರವಾರ: ಇಲ್ಲಿನ ಶಿರವಾಡ ರೈಲು ನಿಲ್ದಾಣದಿಂದ ಮಧ್ಯಾಹ್ನ ಹೊರಟಿದ್ದ ಕಾರವಾರ- ಬೆಂಗಳೂರು ಸೆಂಟ್ರಲ್ (ರೈಲು ಸಂಖ್ಯೆ: 16524) ರೈಲಿನಲ್ಲಿ ತೈಲದ ಟ್ಯಾಂಕ್ ಒಡೆದು ಡೀಸೆಲ್ ಸೋರಿಕೆಯಾಗಿದೆ.
ರೈಲಿನ ಮುಂಭಾಗದ ಎಂಜಿನಿನ್ನಲ್ಲಿದ್ದ ಟ್ಯಾಂಕ್ ಆಕಸ್ಮಿಕವಾಗಿ ಒಡೆದು, ಡೀಸೆಲ್ ಸೋರಿಕೆಯಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಹಾರವಾಡದ ಸುರಂಗದ ಒಳಗಿನಿಂದ ಹೊರ ಬರುವಾಗ ಟ್ಯಾಂಕ್ ಒಡೆದಿದೆ. ಇದನ್ನು ತಿಳಿಯದೇ ಅಂಕೋಲಾದವರೆಗೂ ರೈಲು ಚಲಿಸಿದೆ. ನಂತರ ಪ್ರಯಾಣಿಕರ ಬೋಗಿಯಲ್ಲೂ ಸ್ವಲ್ಪ ಡೀಸೆಲ್ ಹರಿದಿದೆ. ಇದನ್ನರಿತು ಕೆಲವರು ರೈಲು ಅಂಕೋಲಾ ನಿಲ್ದಾಣದಲ್ಲಿ ನಿಂತಾಗ ರೈಲ್ವೆ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ.
ಈ ವೇಳೆ ಪರಿಶೀಲಿಸಿದಾಗ ಟ್ಯಾಂಕ್ ಒಡೆದು ಡೀಸೆಲ್ ಸೋರಿಕೆಯಾಗುತ್ತಿದ್ದದ್ದು ಗಮನಕ್ಕೆ ಬಂದಿದೆ. ನಂತರ ಮಂಗಳೂರಿಗೆ ತೆರಳುವ, ಸಾಮಾನ್ಯ ಬೋಗಿಯಲ್ಲಿದ್ದವರನ್ನು ಮಡಗಾಂವ್- ಮಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಕಳುಹಿಸಿಕೊಡಲಾಗಿದೆ. ಕಾರವಾರದಲ್ಲಿದ್ದ ಗೂಡ್ಸ್ ರೈಲಿನ ಬೋಗಿಯನ್ನು ಅಂಕೋಲಾಕ್ಕೆ ತಂದು, ಕಾರವಾರ- ಬೆಂಗಳೂರು ರೈಲಿನ ಎಂಜಿನ್ ಬದಲಿಸಿ ನಂತರ ಕಳುಹಿಸಿಕೊಡಲಾಗಿದೆ. ಸುಮಾರು 1.45 ಗಂಟೆ ರೈಲು ತಡವಾಗಿ ಚಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.