ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಮುಖಂಡರ ನಡುವೆ ಕೆಸರೆರೆಚಾಟ ಜೋರಾಗಿದೆ.
ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದ್ದೆ ಎಂದು ಆರೋಪಿಸಿರುವ ಬಿಜೆಪಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದೆ.
‘ರಾಜ್ಯದಲ್ಲಿ ಕಾಂಗ್ರೆಸ್ನದ್ದು ಬೇರೆ ಬೇರೆ ಮನೆಗಳ ಅಪಾರ್ಟ್ಮೆಂಟ್, ಆದರೆ ಜೆಡಿಎಸ್ನದ್ದು ಕೌಟುಂಬಿಕ ವಠಾರ. ವಠಾರದೊಳಗೆ ಬಂದು ಹೋಗುವುದಕ್ಕೆ ಕಾರ್ಯಕರ್ತರಿಗೆ ಅವಕಾಶವಿದ್ದರೂ ಅಲ್ಲಿಯೇ ಕಾಯಂ ಆಗಿ ನೆಲೆ ನಿಲ್ಲಲು ಅವಕಾಶವಿಲ್ಲ. ಇವೆರಡೂ ಪಕ್ಷಗಳಿಗೆ ರಾಜ್ಯಕ್ಕಿಂತ ತಮ್ಮ ಮನೆಗಳ ಚಿಂತೆಯೇ ಹೆಚ್ಚು’ ಎಂದು ಬಿಜೆಪಿ ಲೇವಡಿ ಮಾಡಿದೆ.
‘ಚುನಾವಣೆ ಎಂದರೆ ಜೆಡಿಎಸ್ಗೆ ಕುಟುಂಬದ ತೆನೆಯ ಹೊರೆಯೇ ಹೆಚ್ಚು. ಮೊದಲು ಅಪ್ಪ-ಮಕ್ಕಳ ಪಕ್ಷವಾಗಿತ್ತು. ನಂತರ ಅಣ್ಣ ತಮ್ಮನ ಪಕ್ಷವಾಯಿತು. ಈಗ ಓರಗಿತ್ತಿಯರ ಪಕ್ಷವಾಗುತ್ತಿದೆ. ಪಕ್ಷ ಮಾತ್ರವಲ್ಲ, ಕುಟುಂಬವನ್ನೂ ಮೀರಿ ಭವಾನಿ ರೇವಣ್ಣ ತಮಗೆ ತಾವೇ ಟಿಕೆಟ್ ಘೋಷಿಸಿ ದಾಖಲೆ ಮಾಡಿದ್ದಾರೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
‘ಹಿಂದೆ ರಾಜಮಹಾರಾಜರ ಕಾಲದಲ್ಲಿ ರಾಜಕೀಯಕ್ಕಾಗಿ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು. ಆಧುನಿಕ ಭಾರತದಲ್ಲಿ ಅಂಥದ್ದೇ ರಾಜಕಲಹವನ್ನು ಜೆಡಿಎಸ್ ಪರಿಚಯಿಸುತ್ತಿದೆ. ಆ ರಾಜ-ರಾಣಿಯರಿಗೂ ಅಧಿಕಾರದ್ದೇ ಚಿಂತೆ, ಇಲ್ಲಿಯೂ ಅಧಿಕಾರಕ್ಕಾಗಿ ಕುಟುಂಬದಲ್ಲಿ ಬಡಿದಾಟ. ಕಾಲಚಕ್ರ ಪರಿಪೂರ್ಣ ವೃತ್ತ ಮುಗಿಸಿದೆ’ ಎಂದು ಬಿಜೆಪಿ ಕಾಲೆಳೆದಿದೆ.
‘ಎಲ್ಲದಕ್ಕೂ ದೇವೇಗೌಡರಿದ್ದಾರೆ ಎನ್ನುತ್ತಾ ಗೌಡರನ್ನು ಉತ್ಸವ ಮೂರ್ತಿಯಾಗಿಟ್ಟುಕೊಂಡು ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ. ಎಚ್.ಡಿ.ಕುಮಾರಸ್ವಾಮಿಯ ಬುದ್ಧಿವಂತಿಕೆಯ ಹೇಳಿಕೆಯ ಮೇಲೆ ಸೂರಜ್ ರೇವಣ್ಣ ಹೊರಹಾಕಿದ ಪ್ರಜ್ವಲದ ಬೆಂಕಿ ಬಿದ್ದಿದೆ. ಎಲ್ಲದಕ್ಕೂ ಪಾಪ ದೇವೇಗೌಡರು ಮೂಕ ಸಾಕ್ಷಿಯಾಗಬೇಕಿದೆ’ ಎಂದು ಬಿಜೆಪಿ ಛೇಡಿಸಿದೆ.
‘ಮೊದಲಿಗೆ ಎಲ್ಲರ ಮಾತನ್ನೂ ಕೇಳುವಂತೆ ನಾಟಕವಾಡಿ ಯಾರ ಮಾತನ್ನೂ ಕೇಳದಿರುವುದಕ್ಕೆ ಕುಮಾರಸ್ವಾಮಿ ಹೆಸರುವಾಸಿ. ಎಚ್.ಡಿ.ರೇವಣ್ಣ ಪಾಪ ಮಾತನಾಡಿ ಕೆಡುತ್ತಿದ್ದರು. ಆದರೆ, ಈಗ ಅವರೂ ರಾಜಕೀಯವಾಗಿ ಚತುರರಾಗಿದ್ದಾರೆ. ತಮ್ಮ ಮಾತುಗಳನ್ನು ಹೆಂಡತಿ-ಮಕ್ಕಳ ಬಾಯಲ್ಲಿ ಹೇಳಿಸಿ ಯಶಸ್ವಿಯಾಗಿದ್ದಾರೆ’ ಎಂದು ಬಿಜೆಪಿ ಕಿಡಿಕಾರಿದೆ.
‘ಕುಮಾರಸ್ವಾಮಿಯದ್ದು ಅಲ್ಪ ಸ್ವಲ್ಪ ಸೀಟು ಗೆದ್ದು ಸಿಎಂ ಆಗುವ ಹಗಲುಗನಸು. ಕಾಂಗ್ರೆಸ್ ಹೇಗಿದ್ದರೂ 80 ಸ್ಥಾನಗಳ ಗಡಿಯೂ ತಲುಪುವುದಿಲ್ಲ’ ಎಂದು ಬಿಜೆಪಿ ಭವಿಷ್ಯ ನುಡಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.