ADVERTISEMENT

ಸೂಟ್ ಕೇಸ್ ತಲುಪಿಸದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ ಎಚ್‌ಡಿಕೆ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2023, 10:56 IST
Last Updated 15 ಫೆಬ್ರುವರಿ 2023, 10:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಸೂಟ್ ಕೇಸ್ ತಲುಪಿಸದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

ಕುಟುಂಬ ರಾಜಕಾರಣ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕುಟುಂಬ ರಾಜಕಾರಣದ ತುತ್ತತುದಿಯಲ್ಲಿ ಇರುವ ಕುಮಾರಸ್ವಾಮಿ ಅವರು, ಮತ್ತೊಬ್ಬರತ್ತ ಬೊಟ್ಟು ಮಾಡಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದಿರುವುದು ಹಾಸ್ಯಾಸ್ಪದ. ಸೂಟ್ ಕೇಸ್ ತಲುಪಿಸದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಕುಟುಂಬದ 9 ಮಂದಿಗೆ ಮಣೆ ಹಾಕಿರುವುದನ್ನು ಏನನ್ನಬೇಕು? ಎಂದು ಬಿಜೆಪಿ ಪ್ರಶ್ನಿಸಿದೆ.

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ಚಾಳಿ ಜೆಡಿಎಸ್‌ - ಕಾಂಗ್ರೆಸ್‌ ಪಕ್ಷಗಳದ್ದು. ಕುಟುಂಬ ರಾಜಕಾರಣವನ್ನೇ ಆವಾಹಿಸಿಕೊಂಡಿರುವ ಗಾಂಧಿ ಮತ್ತು ಜೆಡಿಎಸ್ ಪರಿವಾರವನ್ನು ಜನ ತಿರಸ್ಕರಿಸಿದರೂ ಬುದ್ಧಿ ಕಲಿಯುತ್ತಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಅವರೇ, ಹಾಸನವೇ ನಿಮಗೆ ಮಗ್ಗುಲ ಮುಳ್ಳಾಗಿದೆಯಲ್ಲವೇ? ಎಂದು ಬಿಜೆಪಿ ಟೀಕಿಸಿದೆ.

ಪುತ್ರ ವ್ಯಾಮೋಹಕ್ಕಾಗಿ ತಂದೆಯವರ ಕ್ಷೇತ್ರವನ್ನು ಪಣಕ್ಕಿಟ್ಟು ಸೋಲಿಗೆ ಕಾರಣವಾಗಿದ್ದ ಕುಮಾರಸ್ವಾಮಿ ಅವರಿಗೆ ಪ್ರಾಯಶ್ಚಿತವಾಗಿಲ್ಲವೇ? ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕೊನೆ ಚುನಾವಣೆಯನ್ನು ಕುಟುಂಬ ರಾಜಕಾರಣಕ್ಕಾಗಿ ಬಲಿಕೊಟ್ಟದ್ದು ದುರಂತ ಎಂದು ಬಿಜೆಪಿ ದೂರಿದೆ.

ADVERTISEMENT

‘ಅಧಿಕಾರದ ಮದದಿಂದ ಮಂಡ್ಯ ಲೋಕಸಭಾ ಚುನಾವಣೆ ಗೆಲ್ಲಲು ಯತ್ನಿಸಿದ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಜನತೆ ತಕ್ಕ ಉತ್ತರ ಕೊಟ್ಟು, ಕುಟುಂಬ ರಾಜಕಾರಣದ ಚಿಗುರನ್ನು ಚಿವುಟಿದರು. ಆದರೂ, ರಾಮನಗರದಲ್ಲಿ ಮತ್ತೊಮ್ಮೆ ಪುತ್ರನನ್ನು ಅಖಾಡಕ್ಕೆ ಇಳಿಸುತ್ತಿರುವುದು, ತಮ್ಮ ಸೋಲಿಗೂ ಕಾರಣವಾಗಬಹುದೆಂಬ ಆತಂಕ ಕುಮಾರಸ್ವಾಮಿ ಅವರಿಗಿದೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಜೆಡಿಎಸ್‌ನಲ್ಲಿ ಮಕ್ಕಳು ಮೊಮ್ಮಕ್ಕಳ ಆದಿಯಾಗಿ ಸೊಸೆಯಂದಿರು ರಾಜಕಾರಣದಲ್ಲಿ ಸಕ್ರಿಯ. ಎಚ್‌.ಡಿ.ಕುಮಾರಸ್ವಾಮಿ ಅವರೇ ತಮ್ಮ ಪತ್ನಿ ಮೂರು ಬಾರಿ ಶಾಸಕಿಯಾಗಬಹುದು. ಆದರೆ, ನಿಮ್ಮ ಅತ್ತಿಗೆ ಒಂದು ಬಾರಿಯೂ ಶಾಸಕಿಯಾಗಬಾರದೇ? ನಿಮ್ಮ ಕುಟುಂಬ ಕಲಹದಲ್ಲಿ ಕಾರ್ಯಕರ್ತರನ್ನು ಅನಾಥರನ್ನಾಗಿ ಮಾಡಿ ಬಿಟ್ಟರಲ್ಲಾ ಎಂದು ಬಿಜೆಪಿ ಕಾಲೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.