ನಾನೇನೂ ಕಮ್ಮಿ ಇಲ್ಲ: ದೇಶಪಾಂಡೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ‘ಚುನಾವಣಾ ರಾಜಕೀಯ’ ವಿಧಾನಸಭೆಯಲ್ಲಿ ಬುಧವಾರ ಚರ್ಚೆಯಾಗಿತ್ತು. ಗುರುವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ನ ಆರ್.ವಿ. ದೇಶಪಾಂಡೆ, ‘ಜಾತಿ ಬಲ ಇಲ್ಲದಿದ್ದರೂ ನಾನು ಒಂಬತ್ತು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. 10 ಬಾರಿ ಸ್ಪರ್ಧಿಸಿ, 2008ರಲ್ಲಿ ಮಾತ್ರ ಸೋತಿದ್ದೆ’ ಎನ್ನುವ ಮೂಲಕ ‘ನಾನೇನೂ ಕಮ್ಮಿ ಇಲ್ಲ’ ಎಂದು ಎದೆತಟ್ಟಿಕೊಂಡರು.
‘ಸಿದ್ದರಾಮಯ್ಯ ಈಗಾಗಲೇ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸಿದ್ದಾರೆ. ಎರಡನೇ ಬಾರಿಗೆ ಮತ್ತೆ ಐದು ವರ್ಷ ಪೂರ್ಣಗೊಳಿಸುವ ಪ್ರಯತ್ನದಲ್ಲಿದ್ದಾರೆ’ ಎಂದರು. ಆಗ ಬಿಜೆಪಿಯ ಸದಸ್ಯರು, ‘ಇನ್ನೊಮ್ಮೆ ಹೇಳಿ’ ಎಂದು ಕಾಲೆಳೆದರು. ಸ್ಪಷ್ಟನೆ ನೀಡಿದ ದೇಶಪಾಂಡೆ, ‘ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯಲ್ಲ. ನನ್ನ ಬೆಂಬಲ ಸಿದ್ದರಾಮಯ್ಯ ಅವರಿಗೆ’ ಎಂದರು.
ಮಧ್ಯಪ್ರವೇಶಿಸಿದ ಬಿಜೆಪಿಯ ಎಸ್. ಸುರೇಶ್ಕುಮಾರ್, ‘ಜನತಾ ಪಕ್ಷ, ಜನತಾ ದಳ, ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೀರಿ. ಅದರ ಗುಟ್ಟೇನು. ಕಾಂಗ್ರೆಸ್- ಜನತಾದಳ ಉತ್ತರ - ದಕ್ಷಿಣ ಧ್ರುವಗಳಿದ್ದಂತೆ. ಆ ಆತ್ಮೀಯತೆ ಹೇಗೆ ಸಾಧ್ಯವಾಯಿತು’ ಎಂದು ಕೇಳಿದರು.
ಅದಕ್ಕೆ ದೇಶಪಾಂಡೆ, ‘ಗುಟ್ಟೇನೂ ಇಲ್ಲ. ಎಲ್ಲರೊಂದಿಗೆ ಸಂಬಂಧ ಚೆನ್ನಾಗಿದೆ. ಮುಖ್ಯಮಂತ್ರಿಗಳ ಜೊತೆಗಿನ ಆತ್ಮೀಯತೆಯ ವಿಚಾರ ಹೇಳಲಾಗದು’ ಎಂದರು.
...........
‘ಹೆಸರು ಸಂಪಾದನೆ ನನ್ನ ಚಿಂತನೆ, ಲಾಭ ನಿನ್ನ ಯೋಜನೆ’
‘ಹೆಸರು ಸಂಪಾದನೆಗೆ ನಾನು, ನನ್ನ ಪಕ್ಷದವರು ಆಲೋಚಿಸುತ್ತೇವೆ. ಲಾಭದ ಬಗ್ಗೆ ಯೋಜನೆ ಮಾಡುವವನು ನೀನು’ ಎಂದು ಬಿಜೆಪಿಯ ಸಿ.ಟಿ. ರವಿ ಅವರಿಗೆ ಕುಟುಕಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ರಾಜ್ಯ ಹಾಗೂ ನಗರದಲ್ಲಿ ನನ್ನದೇ ಆದ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂದು ತೀರ್ಮಾನಿಸಿದ್ದೇನೆ’ ಎಂದರು.
ವಿಧಾನ ಪರಿಷತ್ನ ಪ್ರಶ್ನೋತ್ತರ ಸಮಯದಲ್ಲಿ ಬೆಂಗಳೂರಿನ ಸುರಂಗ ರಸ್ತೆ ಯೋಜನೆ ಪ್ರಸ್ತಾಪವಾಗುತ್ತಿದ್ದ ಸಂದರ್ಭದಲ್ಲಿ, ‘ಯೋಜನೆ ಪಾರದರ್ಶಕವಾಗಿರಲಿ. ಏಕೆಂದರೆ ಲಾಭ ಇಲ್ಲದೆ ಡಿ.ಕೆ. ಶಿವಕುಮಾರ್ ಅವರು ಏನು ಮಾಡುವುದಿಲ್ಲ ಎಂಬ ಭಾವನೆ ಎಲ್ಲರಲ್ಲಿದೆ’ ಎಂದರು ಸಿ.ಟಿ. ರವಿ.
‘ಕೆಲವು ಸಂಸದರು ನನ್ನ ಮೇಲೆ ಆರೋಪ ಮಾಡಿ, ನಾನು ದುಡ್ಡು ಹೊಡೆಯಲು ಈ ಯೋಜನೆ ಮಾಡುತ್ತಿದ್ದೇನೆ ಎಂದು ಟೀಕೆ ಮಾಡಿದ್ದಾರೆ. ನಾನು ಇಲ್ಲಿ ವ್ಯವಹಾರ ನೋಡುತ್ತಿಲ್ಲ. ನಾನು ಬೆಂಗಳೂರಿನ ಮೇಲೆ ಬಹಳ ಆಸಕ್ತಿ ಹೊಂದಿದ್ದೇನೆ. ಯೋಜನೆಯಲ್ಲಿ ಯಾವುದೇ ಲೋಪ, ಭ್ರಷ್ಟಾಚಾರ ಇದ್ದರೆ, ಯಾವುದೇ ತನಿಖೆಗೂ ಸಿದ್ಧ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.