ADVERTISEMENT

ವಿಧಾನಸಭೆ: ವಿಬಿ ಜಿ ರಾಮ್‌ ಜಿ ವಿರೋಧಿಸಿ ನಿರ್ಣಯ

ವಿಪಕ್ಷಗಳ ಆಕ್ಷೇಪದ ನಡುವೆಯೇ ನಿರ್ಣಯ ಮಂಡಿಸಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 21:48 IST
Last Updated 3 ಫೆಬ್ರುವರಿ 2026, 21:48 IST
ವಿಬಿ ಜಿ ರಾಮ್‌ ಜಿ ರದ್ದು ಮಾಡಬೇಕೆಂಬ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದ ಸಿದ್ದರಾಮಯ್ಯ
ವಿಬಿ ಜಿ ರಾಮ್‌ ಜಿ ರದ್ದು ಮಾಡಬೇಕೆಂಬ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದ ಸಿದ್ದರಾಮಯ್ಯ   

ಬೆಂಗಳೂರು: ವಿರೋಧಪಕ್ಷಗಳ ಆಕ್ಷೇಪ ಮತ್ತು ಗದ್ದಲದ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ವಿಬಿ ಜಿ ರಾಮ್‌ ಜಿ’ ಕಾಯ್ದೆ ರದ್ದುಪಡಿಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದರು.

ನಿರ್ಣಯದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು, ‘ಇದು ಸದನದ ನಿರ್ಣಯವಾಗಲು ಸಾಧ್ಯವಿಲ್ಲ. ಅದನ್ನು ನಾವು ಒಪ್ಪುವುದೂ ಇಲ್ಲ. ಕಾಂಗ್ರೆಸ್‌ ಸರ್ಕಾರದ ನಿರ್ಣಯ ಎಂದು ಬೇಕಾದರೆ ಮಂಡಿಸಿ ನಮ್ಮ ತಕರಾರಿಲ್ಲ’ ಎಂದರು.

ಆಕ್ಷೇಪಕ್ಕೆ ಜಗ್ಗದ ಮುಖ್ಯಮಂತ್ರಿ ನಿರ್ಣಯವನ್ನು ಓದಿದರು. ಈ ವೇಳೆ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗುವ ಮೂಲಕ ಅಡ್ಡಿಪಡಿಸಿದರು.

ADVERTISEMENT

ನಿರ್ಣಯದ ಸಾರಾಂಶ: ಗ್ರಾಮೀಣ ಬಡವರ ಪಾಲಿನ ‘ಸಂಜೀವಿನಿ’ಯಾಗಿದ್ದ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು (ನರೇಗಾ) ರದ್ದುಗೊಳಿಸಿರುವುದನ್ನು ಈ ಸದನವು ಗಂಭೀರವಾಗಿ ಪರಿಗಣಿಸುತ್ತದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ‘ವಿಬಿ ಜಿ ರಾಮ್‌ ಜಿ’ (ವಿಬಿ–ಜಿ ರಾಮ್‌–ಜಿ) ಕಾಯ್ದೆಯು ಒಕ್ಕೂಟ ವ್ಯವಸ್ಥೆಯ ಮೂಲ ಆಶಯಗಳಿಗೆ ಮತ್ತು ಗ್ರಾಮೀಣ ಜನರ ಜೀವನೋಪಾಯದ ಹಕ್ಕಿಗೆ ಮಾರಕವಾಗಿದೆ.

ಯುಪಿಎ ಸರ್ಕಾರ ನರೇಗಾ ಜಾರಿ ತಂದಿತ್ತು. ಈ ಯೋಜನೆಯು ನಿರುದ್ಯೋಗ ನಿರ್ಮೂಲನೆ, ವಲಸೆ ತಡೆ, ಲಿಂಗ ತಾರತಮ್ಯವಿಲ್ಲದೆ ವೇತನ ನೀಡುವಿಕೆ, ಪಂಚಾಯತ್‌ ವಿಕೇಂದ್ರೀಕರಣದ ಬಲವರ್ಧನೆ ಹಾಗೂ ಗ್ರಾಮೀಣ ಜನರ ವೈಯಕ್ತಿಕ ಹಾಗೂ ಸಮುದಾಯ ಆಸ್ತಿಗಳ ಸೃಜನೆಯಿಂದ ಕ್ರಾಂತಿಕಾರಿ ಬದಲಾವಣೆ ತಂದಿದೆ.

ಹೊಸ ಕಾಯ್ದೆಯು ಸಂವಿಧಾನದ 21ನೇ ಅನುಚ್ಛೇದದಡಿ ಸಿಗುವ ಜೀವಿಸುವ ಮತ್ತು ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಗ್ರಾಮ ಪಂಚಾಯತ್‌ಗಳಿಗೆ ನೀಡಲಾದ ಅಧಿಕಾರ ಮತ್ತು ಸ್ವಾಯತ್ತೆಯನ್ನು ಕಸಿದುಕೊಳ್ಳುತ್ತದೆ. ಗಾಂಧಿಯವರ ಗ್ರಾಮ ಸ್ವರಾಜ್ಯದ ಉದ್ದೇಶವನ್ನು ವಿಫಲಗೊಳಿಸುತ್ತದೆ.

ದೆಹಲಿಯ ದಂತ ಗೋಪುರದಲ್ಲಿ ಕುಳಿತು ಯೋಜನೆಗಳನ್ನು ರೂಪಿಸುವ ಮೂಲಕ, ಗ್ರಾಮ ಸಭೆಗಳ ಅಧಿಕಾರ ಕಿತ್ತುಕೊಳ್ಳಲಾಗಿದೆ.

ಇದು ಸದನದ ನಿರ್ಣಯ ಎಂದು ಅವರು ಹೇಳಿದ್ದಾರೆ. ಇದು ಕಾಂಗ್ರೆಸ್‌ ಸರ್ಕಾರದ ನಿರ್ಣಯ ರಾಹುಲ್‌ ಗಾಂಧಿಯ ನಿರ್ಣಯ ಎಂದು ಹೇಳಬೇಕು.
-ಆರ್‌.ಅಶೋಕ, ವಿರೋಧ ಪಕ್ಷದ ನಾಯಕ
ನರೇಗಾವನ್ನು ಭ್ರಷ್ಟಾಚಾರಕ್ಕಾಗಿ ಬಳಸಿಕೊಂಡಿದ್ದ ಕಾಂಗ್ರೆಸ್‌ಗೆ ಹೊಸ ಕಾಯ್ದೆ ನಿರಾಸೆ ಉಂಟು ಮಾಡಿದೆ. ಇನ್ನು ಮುಂದೆ ಈ ಯೋಜನೆಯಲ್ಲಿ ಹಣ ಲೂಟಿ ಮಾಡಲು ಆಗುವುದಿಲ್ಲ
-ಅರವಿಂದ ಬೆಲ್ಲದ, ವಿರೋಧ ಪಕ್ಷದ ಉಪನಾಯಕ

ಜನರ ಹಕ್ಕು ಕಸಿದ ಕೇಂದ್ರ: ನಿರ್ಣಯ

ನರೇಗಾದಲ್ಲಿ ಉದ್ಯೋಗವು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಹಾಗೂ ಬೇಡಿಕೆ ಆಧಾರಿತವಾಗಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಇದನ್ನು ಕೇಂದ್ರ ಸರ್ಕಾರ ರೂಪಿಸುವ ಮಾನದಂಡಗಳ ಹಂಗಿಗೆ ಒಳಪಡಿಸಿ ಜನರ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ನಿರ್ಣಯ ಪ್ರತಿಪಾದಿಸಿದೆ.

ನರೇಗಾ ಕಾಯ್ದೆ ಅನುಸಾರ 100 ಮಾನವ ದಿನಗಳ ಕೂಲಿ ಹಣವನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಭರಿಸುತ್ತಿತ್ತು. ಯಾವುದೇ ಸಮಾಲೋಚನೆ ನಡೆಸದ ಕೇಂದ್ರವು ಏಕಾಏಕಿ ರಾಜ್ಯ ಸರ್ಕಾರಗಳು ಶೇ 40ರಷ್ಟು ಅನುದಾನವನ್ನು ಭರಿಸಬೇಕು ಎಂಬ ನಿಯಮ ಹೇರಿದೆ.  125 ಮಾನವ ದಿನಗಳ ಕೆಲಸ ಒದಗಿಸುವುದಾಗಿ ಹೊಸ ಕಾಯ್ದೆಯಲ್ಲಿ ಹೇಳಿದ್ದರೂ 50 ಮಾನವ ದಿನಗಳ ವೆಚ್ಚವನ್ನು ರಾಜ್ಯವೇ ಭರಿಸಬೇಕಾಗುತ್ತದೆ. ಹೊಸ ಕಾಯ್ದೆಯ ಮೂಲಕ ಶೇ 40ರಷ್ಟು ಹೊರೆಯನ್ನು ರಾಜ್ಯದ ಮೇಲೆ ಹೊರಿಸುತ್ತಿರುವುದು ರಾಜ್ಯದ ಆರ್ಥಿಕತೆ ಮತ್ತು ಅಭಿವೃದ್ಧಿಯನ್ನು ಅಪಾಯಕ್ಕೆ ದೂಡುವ ಹುನ್ನಾರ ಎಂದು ದೂರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.