
ಪ್ರಿಯಾಂಕ್ ಖರ್ಗೆ
ಬೆಂಗಳೂರು: ರಾಜ್ಯದಲ್ಲಿ ಜೈವಿಕ ಆರ್ಥಿಕತೆಯು (ಬಯೋ ಎಕಾನಮಿ) 2025 ರಲ್ಲಿ ₹3,25,360 ಕೋಟಿಗಳಿಗೆ (39.2 ಶತಕೋಟಿ ಡಾಲರ್) ಏರಿಕೆಯಾಗಿದೆ. ಹಿಂದಿನ ವರ್ಷಕ್ಕಿಂತ ಗರಿಷ್ಠ ಬೆಳವಣಿಗೆ ದಾಖಲಿಸಿದೆ.
ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯು (ಕೆಐಟಿಎಸ್), ಜೈವಿಕ ತಂತ್ರಜ್ಞಾನ ಉದ್ಯಮಗಳ ಸಂಘದ (ಎಬಿಎಲ್ಇ) ಸಹಯೋಗದಲ್ಲಿ ಸಿದ್ಧಪಡಿಸಿರುವ ರಾಜ್ಯದ ಜೈವಿಕ ಆರ್ಥಿಕ ವರದಿ 2025 ರಲ್ಲಿ ಈ ಮಾಹಿತಿ ಇದೆ. ಈ ವರದಿಯನ್ನು ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದರು.
ಆ ಬಳಿಕ ಮಾತನಾಡಿದ ಪ್ರಿಯಾಂಕ್, ‘ಕರ್ನಾಟಕವು ದೇಶದ ಜೈವಿಕ ಆರ್ಥಿಕತೆಗೆ ಶೇ 21 ರಷ್ಟು ಕೊಡುಗೆ ನೀಡುತ್ತಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ(ಜಿಎಸ್ಡಿಪಿ) ಶೇ 10 ಕ್ಕಿಂತ ಹೆಚ್ಚು ಪಾಲು ಹೊಂದಿದೆ. ಜೈವಿಕ ತಂತ್ರಜ್ಞಾನವು ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿರುವುದಕ್ಕೆ ನಿದರ್ಶನವಾಗಿದೆ. ದೇಶದ ಅತ್ಯಂತ ಪ್ರಬುದ್ಧ ಮತ್ತು ನಾವೀನ್ಯ ಆಧಾರಿತ ಜೈವಿಕ ತಂತ್ರಜ್ಞಾನ ವ್ಯವಸ್ಥೆಯಾಗಿ ಸುಸ್ಥಿರ ರೀತಿಯಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿರುವುದನ್ನು ಈ ವರದಿ ಬೆಳಕು ಚೆಲ್ಲಿದೆ’ ಎಂದರು.
ಜೈವಿಕ ತಂತ್ರಜ್ಞಾನವು ಇನ್ನು ಮುಂದೆ ಪ್ರಯೋಗಾಲಯಗಳಿಗೆ ಮಾತ್ರ ಸೀಮಿತವಾಗಿರದೇ ಆರ್ಥಿಕ ಬೆಳವಣಿಗೆ, ಕೈಗಾರಿಕಾ ನಾವೀನ್ಯತೆ ಮತ್ತು ಸಾಮಾಜಿಕ ಪ್ರಭಾವದ ಕೇಂದ್ರ ಚಾಲಕ ಶಕ್ತಿಯಾಗಲಿದೆ. ಡೀಪ್– ಟೆಕ್ ನವೋದ್ಯಮಗಳಿಗೆ ಬೆಂಬಲ, ನಾವೀನ್ಯತೆ, ಮೂಲ ಸೌಕರ್ಯಗಳ ಬಲಪಡಿಸುವಿಕೆ ಮತ್ತು ಬೆಳವಣಿಗೆಯು ಬೆಂಗಳೂರು ಆಚೆಗಿನ ಪ್ರತಿಯೊಂದು ಪ್ರದೇಶಕ್ಕೂ ತಲುಪುವಂತೆ ನೋಡಿಕೊಳ್ಳಬೇಕಾಗಿದೆ. ಈ ಮೂಲಕ ಸಮಗ್ರ ಜೈವಿಕ ಉತ್ಪಾದನಾ ಆರ್ಥಿಕ ವ್ಯವಸ್ಥೆ ನಿರ್ಮಿಸುವುದರ ಕಡೆ ಸರ್ಕಾರ ಹೆಚ್ಚಿನ ಗಮನ ಹರಿಸಲಿದೆ ಎಂದು ಹೇಳಿದರು.
*ಜೈವಿಕ ಆರ್ಥಿಕತೆ ಸಂಶೋಧನೆ, ಉತ್ಪಾದನೆ, ವಿತರಣೆ ಸೇವೆಗಳನ್ನು ಒಳಗೊಂಡ ಸಂಪೂರ್ಣ ಮೌಲ್ಯ ಸರಪಳಿಯನ್ನು ಒಳಗೊಂಡಿದೆ.
* ಜೈವಿಕ ಆರ್ಥಿಕತೆಯು 2023 ರಲ್ಲಿದ್ದ 31 ಶತಕೋಟಿ ಡಾಲರ್ನಿಂದ ಈಗ 39.2 ಶತಕೋಟಿ ಡಾಲರ್ಗೆ ವಿಸ್ತರಿಸಿದೆ. ಇದು ಒಟ್ಟಾರೆ ಶೇ 26.5 ರಷ್ಟು ಬೆಳವಣಿಗೆ. ಈಗ ರಾಜ್ಯದ ಜಿಡಿಪಿಗೆ ಪ್ರತಿ ಮೂರು ತಿಂಗಳಿಗೆ ಸುಮಾರು 10 ಶತ ಕೋಟಿ ಡಾಲರ್ ಸೇರ್ಪಡೆ ಆಗುತ್ತಿದೆ.
* ಜೈವಿಕ ಔಷಧಗಳು, ಕಡಿಮೆ ವೆಚ್ಚದ ಪರ್ಯಾಯ ಜೈವಿಕ ಔಷಧಿಗಳು (ಬಯೊ ಸಿಮಿಲರ್ಸ್), ಲಸಿಕೆಗಳು ಮತ್ತು ರೋಗ ಪತ್ತೆ ವಲಯಗಳ ಒಳಗೊಂಡಂತೆ ಶೇ 40 ಕ್ಕಿಂತ ಹೆಚ್ಚು ಪಾಲು(ಸುಮಾರು 16.44 ಶತಕೋಟಿ ಡಾಲರ್) ಹೊಂದಿವೆ.
*ಸುಮಾರು 11.46 ಶತಕೋಟಿ ಡಾಲರ್ ಮೊತ್ತದ ಜೈವಿಕ ಕೈಗಾರಿಕಾ ತಂತ್ರಜ್ಞಾನ ವಲಯವು ಶೇ 29 ರಷ್ಟು ಪಾಲು ಹೊಂದುವುದರ ಜೊತೆಗೆ ವೇಗವಾಗಿ ಬೆಳೆಯುತ್ತಿದೆ. ಇದು ರಾಜ್ಯವು ಬಲವಾದ ಜೈವಿಕ ತಯಾರಿಕಾ ಆರ್ಥಿಕತೆಯತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ.
*ಶೇ 25. 8 ಪಾಲು ಹೊಂದಿರುವ ಜೈವಿಕ ಸೇವೆಗಳು ಸ್ಥಿರವಾಗಿ ಬೆಳೆಯುತ್ತಲೇ ಇವೆ. ಜಾಗತಿಕ ಸಂಶೋಧನಾ ಸೇವೆಗಳು, ಡಿಜಿಟಲ್ ಆರೋಗ್ಯ ಮತ್ತು ನಾವೀನ್ಯತೆ– ನೇತೃತ್ವದ ಹೊರಗುತ್ತಿಗೆಯಲ್ಲಿ ಕರ್ನಾಟಕದ ಸ್ಥಾನವನ್ನು ಬಲಪಡಿಸುತ್ತಿವೆ. ಜೈವಿಕ ಕೃಷಿಯು ಸುಸ್ಥಿರ ಕೃಷಿ ಚಟುವಟಿಕೆ ಮತ್ತು ಕಚ್ಚಾ ಸಾಮಗ್ರಿಗಳ ನಾವೀನ್ಯತೆಗಳಿಗೆ ಕೊಡುಗೆ ನೀಡುತ್ತಿದೆ.
*ಬೆಂಗಳೂರು ನಗರ ರಾಜ್ಯದ ಜೈವಿಕ ಆರ್ಥಿಕತೆಯಲ್ಲಿ ಶೇ 54 ರಷ್ಟು ಪಾಲು ಹೊಂದಿದೆ. ಮೈಸೂರು ಶೇ 8.7, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಶೇ 9 ಕ್ಕಿಂತ ಹೆಚ್ಚು ಪಾಲು ಹೊಂದಿವೆ. ಉತ್ತರ ಕರ್ನಾಟಕದ ಜಿಲ್ಲೆಗಳು ಕೃಷಿ ಜೈವಿಕ ತಂತ್ರಜ್ಞಾನ ವಲಯಗಳಾಗಿ ಗಮನ ಸೆಳೆಯುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.