ಬೆಂಗಳೂರು: ಸಮಾಜವನ್ನು ಅಶಾಂತಿಯ ಗೂಡಾಗಿಸಲು ಸಿದ್ದರಾಮಯ್ಯ ಜಾತಿ ಗಣತಿ ಆರಂಭಿಸಿದ್ದರು ಎಂದು ಬಿಜೆಪಿ ಟೀಕಿಸಿದೆ.
ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯವನ್ನು ಜಾತಿ ಆಧಾರದ ಮೇಲೆ ಹರಿದು ಚೂರು ಮಾಡುವುದೇ ಸಿದ್ದರಾಮಯ್ಯ ಉದ್ದೇಶವಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದೆ.
‘ಸಿದ್ದರಾಮಯ್ಯನವರೇ, ನಿಮ್ಮ ಸುಳ್ಳಿನ ವ್ಯಾಪ್ತಿ ಎಷ್ಟು ವಿಸ್ತಾರವಾಗಿದೆ! ರಾಜ್ಯವನ್ನು ಜಾತಿ ಆಧಾರದ ಮೇಲೆ ಹರಿದು ಚೂರು ಮಾಡುವುದೇ ನಿಮ್ಮ ಉದ್ದೇಶವಾಗಿತ್ತು. ಸಮಾಜವನ್ನು ಅಶಾಂತಿಯ ಗೂಡಾಗಿಸಲು ನೀವು ಜಾತಿ ಗಣತಿ ಆರಂಭಿಸಿದಿರಿ. ಆದರೆ ಅದಕ್ಕೆ ಸಾಮಾಜಿಕ ಹಾಗೂ ಆರ್ಥಿಕ ಗಣತಿ ಎಂಬ ಹೆಸರು ನೀಡಿದಿರಿ. ಎಂಥಹ ಸುಳ್ಳು!?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
‘ಜಾತಿ ಗಣತಿಯ ಉದ್ದೇಶ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸುವುದಾಗಿರಲಿಲ್ಲ. ಅದು ಸಿದ್ದರಾಮಯ್ಯ ಅವರ ಚುನಾವಣಾ ತಂತ್ರಗಾರಿಕೆಯಾಗಿತ್ತು. ಯಾವ ಕ್ಷೇತ್ರದಲ್ಲಿ ಯಾವ ಜಾತಿಗೆ ಸೇರಿದ ಎಷ್ಟು ಜನರಿದ್ದಾರೆ, ಕ್ಷೇತ್ರವಾರು ಧಾರ್ಮಿಕ ಪ್ರಾಬಲ್ಯ ಹೇಗಿದೆ ಎಂದು ಅಂದಾಜಿಸಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವುದಷ್ಟೇ ನಿಮ್ಮ ಉದ್ದೇಶವಾಗಿತ್ತು’ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಬಿಜೆಪಿ ಟ್ವೀಟ್ನಲ್ಲಿ ಉಲ್ಲೇಖಿಸಿದೆ.
‘ಉದ್ದೇಶ ಶುದ್ಧಿ ಇಲ್ಲದ ಯಾವ ಕಾರ್ಯವೂ ಯಶಸ್ವಿಯಾಗುವುದಿಲ್ಲ. ಇದಕ್ಕೆ ಸಿದ್ದರಾಮಯ್ಯ ಜಾತಿ ಗಣತಿಯೇ ದೊಡ್ಡ ಉದಾಹರಣೆ. ಸಮಾಜವನ್ನು ಒಡೆಯುವುದಕ್ಕಾಗಿ ಜನರ ತೆರಿಗೆ ಹಣದಲ್ಲಿ ನೀವು ನೂರಾರು ಕೋಟಿ ವೆಚ್ಚ ಮಾಡಿದರೂ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಯ್ತು. ಸಿದ್ದರಾಮಯ್ಯ ಅವರ ಜಾತಿ ಗಣತಿ ವರದಿ ಸರ್ಕಾರ ಅಂಗೀಕರಿಸುವುದಕ್ಕೆ ಮುನ್ನವೇ ಬಹಿರಂಗವಾಯ್ತು. ಚುನಾವಣಾ ಆಕಾಂಕ್ಷಿಗಳು ಅದನ್ನು ಬೀದಿ ಬೀದಿಯಲ್ಲಿ ಮಾರಾಟ ಮಾಡಿದರು. ಪಾವಿತ್ರ್ಯವೇ ಇಲ್ಲದ ಈ ವರದಿಯನ್ನು ಸಿದ್ದರಾಮಯ್ಯ ಅವರು ಈಗಲೂ ರಾಜಕೀಯಕ್ಕೆ ಬಳಸುತ್ತಿದ್ದಾರೆ’ ಎಂದು ಮತ್ತೊಂದು ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.