ADVERTISEMENT

ಕುಂದಗೋಳದಲ್ಲಿ ‘ಕುಸುಮಾ’, ಚಿಂಚೋಳಿಯಲ್ಲಿ ‘ಅವಿನಾಶ್‌’ಗೆ ಜಯ

​ಪ್ರಜಾವಾಣಿ ವಾರ್ತೆ
Published 23 ಮೇ 2019, 18:09 IST
Last Updated 23 ಮೇ 2019, 18:09 IST
ಡಾ.ಅವಿನಾಶ್ ಜಾಧವ್‌ ಮತ್ತು ಕುಸುಮಾವತಿ ಶಿವಳ್ಳಿ
ಡಾ.ಅವಿನಾಶ್ ಜಾಧವ್‌ ಮತ್ತು ಕುಸುಮಾವತಿ ಶಿವಳ್ಳಿ   

ಹುಬ್ಬಳ್ಳಿ/ಕಲಬುರ್ಗಿ: ಭಾರೀ ಕುತೂಹಲ ಕೆರಳಿಸಿದ್ದ ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ ಹಾಗೂ ಚಿಂಚೋಳಿ (ಮೀಸಲು) ಕ್ಷೇತ್ರದಲ್ಲಿ ಡಾ.ಅವಿನಾಶ್ ಜಾಧವ ಜಯ ಸಾಧಿಸಿದ್ದಾರೆ. ಕುಸುಮಾವತಿ ಅವರು 1,061 ಮತ ಹಾಗೂ ಅವಿನಾಶ್ 8,030 ಮತಗಳ ಅಂತರದಿಂದ ಗೆದ್ದಿದ್ದಾರೆ.

ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ನಿಧನದ ಅನುಕಂಪ ಕುಂದಗೋಳದಲ್ಲಿ ಕುಸುಮಾವತಿ ಅವರನ್ನು ಗೆಲುವಿನ ದಡ ಸೇರಿಸಿದ್ದರೆ, ಮೋದಿ ಅಲೆ ಹಾಗೂ ಜಾತಿ ಸಮೀಕರಣದೊಂದಿಗೆ ಎಲ್ಲಾ ಸಮುದಾಯಗಳೊಂದಿಗೆ ತಂದೆ ಹೊಂದಿದ್ದ ಒಡನಾಟ ವೈದ್ಯಕೀಯ ವಿದ್ಯಾರ್ಥಿಯಾಗಿರುವ ಅವಿನಾಶ್‌ಗೆ ಚಿಂಚೋಳಿಯಲ್ಲಿ ವಿಜಯ ತಂದುಕೊಟ್ಟಿದೆ.

ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಡಾ. ಉಮೇಶ ಜಾಧವ ತಮ್ಮ ರಾಜೀನಾಮೆ ನೀಡಿ, ಖರ್ಗೆ ವಿರುದ್ಧ ಲೋಕಸಭೆಗೆ ಸ್ಪರ್ಧಿಸಿದ್ದರಿಂದ ಈ ಸ್ಥಾನ ತೆರವಾಗಿತ್ತು. ಬಿಜೆಪಿಯಲ್ಲಿದ್ದ ಸುಭಾಷ ರಾಠೋಡ ತಮಗೆ ಲೋಕಸಭೆ ಟಿಕೆಟ್‌ ಸಿಗಲಿಲ್ಲ ಎಂದು ಕಾಂಗ್ರೆಸ್‌ ಸೇರಿದ್ದರು.

ADVERTISEMENT

ಹಾಗಾಗಿ, ಉಪ ಚುನಾವಣೆಯಲ್ಲಿ ಅವರನ್ನೇ ಕಾಂಗ್ರೆಸ್‌ ಕಣಕ್ಕಿಳಿಸಿತ್ತು. ಅವರ ವಿರುದ್ಧ ತಮ್ಮ ಮಗ ಅವಿನಾಶ್‌ಗೆ ಟಿಕೆಟ್‌ ಕೊಡಿಸುವಲ್ಲಿ ಉಮೇಶ ಯಶಸ್ವಿಯಾಗಿದ್ದರು. ಅಭ್ಯರ್ಥಿಗಳಿಬ್ಬರೂ ಬಂಜಾರ ಸಮುದಾಯದವರಾಗಿದ್ದರು. ಇಲ್ಲಿ ಅಭ್ಯರ್ಥಿಗಳು ಗೌಣವಾಗಿದ್ದರು. ಇದು ಉಮೇಶ ಜಾಧವ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ನಡುವಿನ ಚುನಾವಣೆ ಎಂದೇ ಬಿಂಬಿತವಾಗಿತ್ತು.

ಕುಂದಗೋಳದಲ್ಲಿ ಕಾಂಗ್ರೆಸ್‌ನ ಕುಸುಮಾವತಿ, ತಮ್ಮ ಪತಿಯ ನಿಧನದ ಅನುಕಂಪ ಹಾಗೂ ಅಭಿವೃದ್ದಿಯ ಕೆಲಸಗಳನ್ನು ನೆಚ್ಚಿಕೊಂಡಿದ್ದರು. ರಾಜ್ಯ ಸಮ್ಮಿಶ್ರ ಸರ್ಕಾರದ ಅಳಿವು ಹಾಗೂ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಈ ಚುನಾವಣೆ ನಾಂದಿ ಹಾಡಲಿದೆ ಎಂಬುದೇ ಬಿಜೆಪಿಯ ಎಸ್‌.ಐ. ಚಿಕ್ಕನಗೌಡ್ರ ಪ್ರಚಾರದ ಮುಖ್ಯ ಅಂಶವಾಗಿತ್ತು.

ಕಾಂಗ್ರೆಸ್‌ ಪಕ್ಷವು ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಚುನಾವಣೆಯ ಉಸ್ತುವಾರಿ ವಹಿಸಿತ್ತು. ತಮ್ಮ ಸಂಬಂಧಿಯಾಗಿದ್ದ ಬಿಜೆಪಿಯ ಎಸ್‌.ಐ. ಚಿಕ್ಕನಗೌಡ್ರ ಗೆಲುವಿಗಾಗಿ, ಪಕ್ಷದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸತತವಾಗಿ ಪ್ರಚಾರ ನಡೆಸಿದ್ದರು.

ಕೆಲಸ ಮಾಡದ ಮೋದಿ ಅಲೆ

ಉತ್ತರ ಕರ್ನಾಟಕದ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದರೆ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಶಿವಳ್ಳಿ ಕುಟುಂಬದ ಪರವಾದ ಅನುಕಂಪದ ಅಲೆ ಮುಂದೆ ನರೇಂದ್ರ ಮೋದಿ ಅಲೆ ಕೆಲಸ ಮಾಡಿಲ್ಲ ಎಂದೂ ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.