
ಬೆಂಗಳೂರು: ರಾಜ್ಯದಲ್ಲಿರುವ ಕೇಂದ್ರ ಕಾರಾಗೃಹ ಹಾಗೂ ಜಿಲ್ಲಾ ಕಾರಾಗೃಹಗಳ ಸುಧಾರಣೆಗೆ ಸರ್ಕಾರ ನೇಮಿಸಿರುವ ಉನ್ನತ ಮಟ್ಟದ ಸಮಿತಿಯ ಸದಸ್ಯರು, ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ, ಕೆಎಸ್ಆರ್ಪಿ ಐಜಿಪಿ ಸಂದೀಪ್ ಪಾಟೀಲ ನೇತೃತ್ವದ ಸಮಿತಿ, ಕಳೆದ ವಾರ ತಿಹಾರ್ ಜೈಲಿಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿತು ಎಂಬುದು ಗೊತ್ತಾಗಿದೆ.
ಅತ್ಯಾಚಾರ, ಸರಣಿ ಕೊಲೆಯ ಪಾತಕಿ ಉಮೇಶ್ ರೆಡ್ಡಿ, ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆಯ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ, ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ ಪ್ರಕರಣದ ಆರೋಪಿ ತರುಣ್ ರಾಜ್ ತಾವಿರುವ ಬ್ಯಾರಕ್ನಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತಿರುವ, ಟಿ.ವಿ ವೀಕ್ಷಣೆ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗಷ್ಟೇ ಹರಿದಾಡಿದ್ದವು. ಅದರ ಬೆನ್ನಲ್ಲೇ, ಮಾಂಸ, ಮದ್ಯ ಸೇವಿಸಿ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳು ನೃತ್ಯ ಮಾಡುತ್ತಿರುವ ವಿಡಿಯೊ ಸಹ ಜಾಲತಾಣದಲ್ಲಿ ಹರಿದಾಡಿತ್ತು.
ಬಳಿಕ ಗೃಹ ಸಚಿವ ಜಿ.ಪರಮೇಶ್ವರ ಅವರು ಕಾರಾಗೃಹ ಹಾಗೂ ಸುಧಾರಣೆಗಳ ಇಲಾಖೆ ಹಾಗೂ ಪೊಲೀಸರ ಸಭೆ ನಡೆಸಿದ್ದರು. ಸಭೆಯ ಬಳಿಕ ಜೈಲುಗಳಲ್ಲಿ ವ್ಯವಸ್ಥೆಯ ಸುಧಾರಣೆಗೆ ಉನ್ನತಮಟ್ಟದ ಸಮಿತಿ ರಚಿಸಿ ಆದೇಶಿಸಿದ್ದರು.
‘ತಿಹಾರ್ ಜೈಲಿನ ಅಧಿಕಾರಿಗಳ ಜತೆಗೆ ಚರ್ಚಿಸಿ ಕೈದಿಗಳಿಗೆ ನೀಡಿರುವ ಸೌಲಭ್ಯಗಳು ಹಾಗೂ ಸುಧಾರಣಾತ್ಮಕ ಅಂಶಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಜೈಲಿನ ಕೈಪಿಡಿ ಪ್ರಕಾರ ಕೈದಿಗಳಿಗೆ ಯಾವೆಲ್ಲಾ ಸೌಲಭ್ಯ ನೀಡಲಾಗುತ್ತಿದೆ? ಜೈಲಿನ ಆಡಳಿತ ಜಾರಿಗೆ ತಂದಿರುವ ಅಂಶಗಳ ಬಗ್ಗೆ, ಬಂದಿಗಳಿಗೆ ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅಲ್ಲದೆ, ಮಂಗಳೂರು ಹಾಗೂ ಕಲಬುರಗಿ ಜೈಲಿಗೂ ಸಮಿತಿ ತೆರಳಿ ಪರಿಶೀಲಿಸಿದೆ’ ಎಂದು ಮೂಲಗಳು ಹೇಳಿವೆ.
‘ರಾಜ್ಯದಲ್ಲಿರುವ ಇತರೆ ಕೇಂದ್ರ ಕಾರಾಗೃಹಗಳು ಹಾಗೂ ಜಿಲ್ಲಾ ಕಾರಾಗೃಹಗಳಿಗೂ ಈ ಸಮಿತಿ ಭೇಟಿ ನೀಡಿ ಅಧ್ಯಯನ ನಡೆಸಲಿದೆ. ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೀಡಿ ಹಾಗೂ ಸಿಗರೇಟ್ ಮಾರಾಟ ಬಂದ್ ಮಾಡಿರುವುದನ್ನು ಖಂಡಿಸಿ ಕಳೆದ ಮೂರು ದಿನಗಳಿಂದ ವಿಚಾರಣಾಧೀನ ಹಾಗೂ ಸಜಾಬಂದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಲ ವರ್ಷಗಳಿಂದ ಜೈಲಿನ ಕ್ಯಾಂಟೀನ್ನಲ್ಲಿ ಬೀಡಿ ಹಾಗೂ ಸಿಗರೇಟ್ ಮಾರಾಟ ಮಾಡಲಾಗುತ್ತಿತ್ತು. ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬಂದ್ ಮಾಡಲಾಗಿದೆ. ನಿಷೇಧಿತ ವಸ್ತುಗಳು ಜೈಲಿಗೆ ಪೂರೈಕೆ ಆಗುತ್ತಿದ್ದವು. ಅದನ್ನು ನಿಯಂತ್ರಿಸಲು 20 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡ ವಿಶೇಷ ಶೋಧನಾ ತಂಡವನ್ನು ರಚಿಸಲಾಗಿತ್ತು. ಆ ತಂಡವು ತಪಾಸಣೆ ನಡೆಸಿ 50 ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೇ ಸಿಗರೇಟ್ ಪೂರೈಕೆಗೆ ಕಡಿವಾಣ ಹಾಕಿದೆ ಎಂದು ಗೊತ್ತಾಗಿದೆ.
ಇದರಿಂದ ಅಸಮಾಧಾನಗೊಂಡಿರುವ ಕೈದಿಗಳು ಊಟ ತ್ಯಜಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಬೀಡಿ ಸಿಗರೇಟ್ ಮಾರಾಟಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಪರಪ್ಪನ ಅಗ್ರಹಾರ ಜೈಲಿನ ಒಳಗಿರುವ ಆಡಳಿತ ಕಚೇರಿ ಎದುರು ಧರಣಿ ಮಾಡುತ್ತಿದ್ದಾರೆ. ಕಳೆದ ವಾರ ನಡೆದ ದಿಢೀರ್ ದಾಳಿ ವೇಳೆ ವಿವಿಧ ಬ್ಯಾರಕ್ನಲ್ಲಿ 50 ಮೊಬೈಲ್ ಫೋನ್ಗಳು 22 ಸಿಮ್ ಕಾರ್ಡ್ಗಳು 5 ಚಾರ್ಜರ್ಗಳು 4 ಇಯರ್ ಬಡ್ಸ್ ₹49 ಸಾವಿರ ನಗದು ಚಾಕು ಪತ್ತೆ ಆಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.