ಬೆಂಗಳೂರು: ಕೋವಿಡ್ 19 ಮೂರನೆ ಅಲೆಗೆ ಸಿದ್ಧತೆಯ ಯೋಜನೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಪ್ರಶ್ನೆ ಮಾಡಿರುವ ಕಾಂಗ್ರೆಸ್, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಇನ್ಯಾವ ಹಗರಣ ನಡೆಸಲು ಕಾಯುತ್ತಿದ್ದೀರಿ? ಎಂದಿದೆ.
ಕೊರೊನಾ ವೈರಸ್ನ ಒಂದನೇ ಅಲೆಗೆ ತಟ್ಟೆ, ಗಂಟೆ, ಜಾಗಟೆ, ಚಪ್ಪಾಳೆ. ಕೊರೊನಾ ವೈರಸ್ನ ಎರಡನೇ ಅಲೆಗೆ ಟಿಕಾ ಉತ್ಸವ, ಕುಂಭಮೇಳ, ವರ್ಚಸ್ಸು ವೃದ್ಧಿಗೆ ಕಸರತ್ತು. ಕೊರೊನಾ ವೈರಸ್ನ ಮೂರನೇ ಅಲೆಗೆ ಸಿದ್ಧತೆಯ ಯೋಜನೆ ಇಲ್ಲದೆ ಇಮೇಜ್ ಬಿಲ್ಡಿಂಗ್ ಚಿಂತನೆಯಲ್ಲಿದ್ದೀರಾ ನರೇಂದ್ರ ಮೋದಿ ಅವರೇ? ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಬೆನ್ನಲ್ಲೇ ರಾಜ್ಯ ಬಿಜೆಪಿ ಸರಕಾರದ ಸಿದ್ಧತೆ ಬಗ್ಗೆಯೂ ಕಾಂಗ್ರೆಸ್ ಟೀಕೆ ಮಾಡಿದೆ. ಕೊರೊನಾ ಮೊದಲ ಅಲೆಗೆ ಬೆಡ್ ಬಾಡಿಗೆ ಹಗರಣ, ವೈದ್ಯಕೀಯ ಉಪಕರಣ ಖರೀದಿ ಹಗರಣ. ಕೊರೊನಾ ಎರಡನೇ ಅಲೆಗೆ ಬೆಡ್ ಬ್ಲಾಕಿಂಗ್ ಹಗರಣ, ವ್ಯಾಕ್ಸಿನ್ ಬ್ಲಾಕಿಂಗ್ ಹಗರಣ. ಕೊರೊನಾ 3ನೇ ಅಲೆಗೆ ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳದೆ ಇನ್ಯಾವ ಹಗರಣ ನಡೆಸಲು ಕಾಯುತ್ತಿರುವಿರಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಪ್ರಶ್ನಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.