ಬೆಂಗಳೂರು: ‘ಮುಖ್ಯಮಂತ್ರಿ ಮಾಡುತ್ತೇವೆ ಅಂದರೆ, ಇವರೆಲ್ಲ ಬಿಜೆಪಿಗೆ ಹೋಗಬಹುದು. ಇದೇ ಕೆ.ಎನ್. ರಾಜಣ್ಣ ಅವರು ಹೇಳಿದ್ದ ಸೆಪ್ಟೆಂಬರ್ ಕ್ರಾಂತಿ’ ಎಂದು ರಾಜಣ್ಣ ಅವರ ಪುತ್ರ, ವಿಧಾನಪರಿಷತ್ ಸದಸ್ಯ ಆರ್. ರಾಜೇಂದ್ರ ವಾಗ್ದಾಳಿ ನಡೆಸಿದರು.
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ರಾಜೇಂದ್ರ, ‘ಸೆಪ್ಟೆಂಬರ್ ಕ್ರಾಂತಿ ಬಾಲಕೃಷ್ಣ ಅವರಿಂದಲೇ ಆರಂಭ ಆಗಲಿದೆ’ ಎಂದರು.
‘ಸಿದ್ದರಾಮಯ್ಯ ಅವರ ಪರವಾಗಿ ಇದ್ದೇವೆ ಎಂಬ ಕಾರಣಕ್ಕಾಗಿ ನಮಗೆ ಅನ್ಯಾಯ ಆಗಿದೆ. ನಾವು ಇನ್ನು 10 ವರ್ಷ ಬಿಟ್ಟರೂ ಸಿದ್ದರಾಮಯ್ಯನವರ ಪರವೇ ಇರುತ್ತೇವೆ. ಬೇರೆ ಯಾರನ್ನೊ ತೋರಿಸಿ ನಾವು ಮತ ಪಡೆಯುವುದು ಅಷ್ಟರಲ್ಲೇ ಇದೆ’ ಎಂದು ವಾಗ್ದಾಳಿ ನಡೆಸಿದರು.
‘ಸಂಚು, ಪಿತೂರಿಯಿಂದ ರಾಜಣ್ಣ ಅವರ ರಾಜೀನಾಮೆ ಪಡೆದಿದ್ದಾರೆ. ಭ್ರಷ್ಟಾಚಾರ ಮಾಡಿ ಸಚಿವ ಸ್ಥಾನ ಬಿಟ್ಟಿಲ್ವಲ್ಲ? ರಾಜಣ್ಣ ಯಾವತ್ತೂ ಪಕ್ಷದ ವಿರುದ್ದ ಮಾತನಾಡಿಲ್ವಲ್ಲ?’ ಎಂದರು.
‘ಡಿ.ಕೆ. ಶಿವಕುಮಾರ್ ಜೊತೆಗೆ ಕೆಲವರು ಕಾಲು ಹೊರಗಡೆ ಇಟ್ಟಿದ್ದಾರೆ ಎಂಬುದು ನಿಜವೇ’ ಎಂಬ ಪ್ರಶ್ನೆಗೆ, ‘ಹೌದು’ ಎಂದ ರಾಜೇಂದ್ರ, ‘ನಾವು ಸಿದ್ದರಾಮಯ್ಯ ಪರ ಇದ್ದೇವೆ ಎಂದೇ ಇಷ್ಟೆಲ್ಲ ಮಾಡಿದ್ದಾರೆ. ನಮಗೆ ಆಗಿರುವ ಅನ್ಯಾಯದ ಪ್ರಕಾರ ಮತ್ತೆ ಸಚಿವ ಸ್ಥಾನ ಕೊಡಬೇಕು. ಪರಿಶಿಷ್ಟ ವರ್ಗಕ್ಕೆ ಸೇರಿದ 15 ಶಾಸಕರಿದ್ದಾರೆ. ಹೀಗಾಗಿ, ವಾಲ್ಮೀಕಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡಬೇಕು’ ಎಂದು ಆಗ್ರಹಿಸಿದರು.
‘ವಿಧಾನಸಭೆಯಲ್ಲಿ ರಾಜಣ್ಣ ಆರ್ಎಸ್ಎಸ್ ಗೀತೆ ಹಾಡಲಿಲ್ಲ. ಬಾಲ್ಯದಿಂದ ಚಡ್ಡಿ ಹಾಕಿಕೊಂಡು ಶಾಖೆಗೆ ಹೋಗಲಿಲ್ಲ’ ಎಂದು ಹೇಳುವ ಮೂಲಕ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ರಾಜೇಂದ್ರ ವಾಗ್ದಾಳಿ ನಡೆಸಿದರು.
‘ಸಿದ್ದರಾಮಯ್ಯ ಅವರ ಪರ ಇರುವುದರಿಂದ ನಾವು ಇಷ್ಟು ಧೈರ್ಯವಾಗಿದ್ದೇವೆ. ಸೆಪ್ಟೆಂಬರ್ನಲ್ಲಿ ಇವರ (ಬಾಲಕೃಷ್ಣ) ಬ್ರೈನ್ ಮ್ಯಾಪ್ ಮಾಡಿ. ಆಗ ಯಾರ್ಯಾರು ಯಾರ್ಯಾರ ಸಂಪರ್ಕದಲ್ಲಿದ್ದಾರೆಂದು ಗೊತ್ತಾಗಲಿದೆ’ ಎಂದೂ ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.