ADVERTISEMENT

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೋಳಿ ಹಿಡಿಯಲು ಮಾತ್ರ ಲಾಯಕ್ಕು: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 15:35 IST
Last Updated 20 ಜನವರಿ 2023, 15:35 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೋಳಿ ಹಿಡಿಯಲು ಮಾತ್ರ ಲಾಯಕ್ಕು ಎಂದು ರಾಜ್ಯ ಕಾಂಗ್ರೆಸ್‌ ಘಟಕ ಗೃಹ ಸಚಿವರನ್ನು ಛೇಡಿಸಿದೆ.

ಕೊಪ್ಪಳದಲ್ಲಿ ಜೂಜಾಟಕ್ಕೆ ಇಡಲಾಗಿದ್ದ ಕೋಳಿಯನ್ನು ಬಂಧಿಸಿದ್ದ ಪ್ರಕರಣ ಹಾಗೂ ಪಿ.ಎಸ್.ಐ ಹಗರಣದ ಆರೋಪಿ ಆರ್‌.ಡಿ ಪಾಟೀಲ ಪರಾರಿಯಾದ ಪ್ರಕರಣವನ್ನು ಉಲ್ಲೇಖಿಸಿ ಕಾಂಗ್ರೆಸ್‌ ಈ ಟ್ವೀಟ್‌ ಮಾಡಿದೆ.

‘ಬಿಜೆಪಿ ಸರ್ಕಾರದಲ್ಲಿ ಕೋಳಿಗಳನ್ನು ಅರೆಸ್ಟ್ ಮಾಡಲಾಗುತ್ತದೆ. ಬಹುದೊಡ್ಡ ಅಕ್ರಮವೊಂದರ ಆರೋಪಿ ಪೊಲೀಸರನ್ನು ತಳ್ಳಿ ಪರಾರಿಯಾಗುತ್ತಾನೆ. ದೇಶದಲ್ಲೇ ನಂಬರ್ 1 ಎನಿಸಿಕೊಂಡಿದ್ದ ರಾಜ್ಯದ ಗೃಹ ಇಲಾಖೆಯನ್ನು ಇಂದು ನಾಚಿಕೆಗೇಡಿನ ಸ್ಥಿತಿಗೆ ತಂದಿಟ್ಟಿದೆ ಬಿಜೆಪಿ ಸರ್ಕಾರ. ಆರಗ ಜ್ಞಾನೇಂದ್ರ ಅವರು ಕೋಳಿ ಹಿಡಿಯಲು ಮಾತ್ರ ಲಾಯಕ್ಕಾಗಿದ್ದಾರೆ‘ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ADVERTISEMENT

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಸಿಐಡಿ ಅಧಿಕಾರಿಗಳ ಎದುರೇ ಆರ್.ಡಿ. ಪಾಟೀಲ ಪರಾರಿ

ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗಡೆ ಇದ್ದ ಆರ್.ಡಿ. ಪಾಟೀಲ ನಗರದ ಅಕ್ಕಮಹಾದೇವಿ ‌ಕಾಲೊನಿಯ ತನ್ನ ಮನೆಯಿಂದ ಗುರುವಾರ ರಾತ್ರಿ ‌ಪರಾರಿಯಾಗಿದ್ದಾನೆ.
ಈ ಸಂಬಂಧ ‌ಸಿಐಡಿ ಅಧಿಕಾರಿಗಳು ಅಶೋಕ‌ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ಆರೋಪಿಗಳಾದ ಆರ್.ಡಿ. ಪಾಟೀಲ ಆತನ ಸಹೋದರ ಮಹಾಂತೇಶ ಪಾಟೀಲ, ದಿವ್ಯಾ ಹಾಗರಗಿ, ಕಾಶಿನಾಥ ಚಿಲ್ಲ ಹಾಗೂ ಮಂಜುನಾಥ ಮೇಳಕುಂದಿಯ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ‌ (ಇ.ಡಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದರು. ದಾಳಿ ನಡೆಸಿ ರಾತ್ರಿ ಹೊರಬಂದ ಬಳಿಕ ತುಮಕೂರು ಜಿಲ್ಲೆಯಲ್ಲಿ ದಾಖಲಾದ ಪಿಎಸ್ಐ ನೇಮಕಾತಿ ಅಕ್ರಮದ ಸಂಬಂಧ ಬಂಧಿಸಲು ಸಿಐಡಿ ಅಧಿಕಾರಿಗಳು ಆರ್.ಡಿ‌. ಪಾಟೀಲ ‌ಮನೆಗೆ ತೆರಳಿದ್ದಾರೆ.

ಈ ಸಂದರ್ಭದಲ್ಲಿ , 'ಯಾವ ಕೇಸು, ನನಗೇನೂ ಗೊತ್ತೇ ಇಲ್ಲ. ವಿನಾಕಾರಣ ನೀವು ‌ಕಿರುಕುಳ ನೀಡುತ್ತಿದ್ದೀರಿ' ಎನ್ನುತ್ತಲೇ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ ಎಂದು ಸಿಐಡಿ ಡಿಟೆಕ್ಟಿವ್‌ ಸಬ್ ಇನ್ ಸ್ಪೆಕ್ಟರ್ ಆನಂದ್ ದೂರಿನಲ್ಲಿ ತಿಳಿಸಿದ್ದಾರೆ.

ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿ ಆರ್.ಡಿ. ಪಾಟೀಲ‌ ಮನೆಯಿಂದ ನಾಪತ್ತೆಯಾಗಿದ್ದಾನೆ.‌ ಅದ್ದರಿಂದ ಅತನಿಗೆ ನೀಡಿದ ಜಾಮೀನು ರದ್ದುಪಡಿಸಬೇಕು ಎಂದು ಕೋರಿ ಸಿಐಡಿ ಅಧಿಕಾರಿಗಳು ಕೆಲ ದಿನಗಳ ‌ಹಿಂದೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.