ADVERTISEMENT

ರಾಜ್ಯದಲ್ಲಿ ಆರು ತಿಂಗಳಲ್ಲಿ 526 ಕೊಲೆ: ಪರಿಶಿಷ್ಟರ ಮೇಲೆ 975 ದೌರ್ಜನ್ಯ ಪ್ರಕರಣ

ಆದಿತ್ಯ ಕೆ.ಎ
Published 31 ಜುಲೈ 2025, 23:48 IST
Last Updated 31 ಜುಲೈ 2025, 23:48 IST
   

ಬೆಂಗಳೂರು: ರಾಜ್ಯದಲ್ಲಿ 2025ರ ಜನವರಿಯಿಂದ ಜೂನ್‌ ಅಂತ್ಯದವರೆಗೆ 526 ಕೊಲೆಗಳು ನಡೆದಿದ್ದು, ವಿವಿಧ ಪೊಲೀಸ್‌ ಠಾಣೆಗಳಲ್ಲಿ 6,952 ಹಲ್ಲೆ ಪ್ರಕರಣಗಳು ದಾಖಲಾಗಿವೆ.

ಇದೇ ಅವಧಿಯಲ್ಲಿ ಗಲಭೆ ಪ್ರಕರಣಗಳು ಕಡಿಮೆಯಾಗಿದ್ದರೂ ಗುಂಪು ಘರ್ಷಣೆ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗಿವೆ.

ಜಮೀನಿಗೆ ಸಂಬಂಧಿಸಿದ ವ್ಯಾಜ್ಯ, ಹಳೇ ದ್ವೇಷ, ಶೀಲ ಶಂಕೆ, ಎರಡು ಗುಂಪುಗಳ ನಡುವೆ ಘರ್ಷಣೆ, ಪ್ರೇಮ ವೈಫಲ್ಯ, ಪ್ರತಿಷ್ಠೆಗಾಗಿ ರೌಡಿಗಳ ನಡುವೆ ಕಾಳಗ, ಚಿನ್ನಾಭರಣ ಹಾಗೂ ಇತರೆ ಕಾರಣಗಳಿಗೆ ಕೊಲೆಗಳು ನಡೆದಿವೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಧರ್ಮ ದ್ವೇಷದ ಕಾರಣಕ್ಕೆ ಕೊಲೆಗಳು ನಡೆದಿವೆ ಎಂಬುದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.

ADVERTISEMENT

2022ರಲ್ಲಿ ಜನವರಿಯಿಂದ ಜೂನ್‌ವರೆಗೆ 715 ಕೊಲೆಗಳು ನಡೆದಿದ್ದವು. ಇದೇ ಅವಧಿಯಲ್ಲಿ 2023ರಲ್ಲಿ 650 ಕೊಲೆಗಳು ನಡೆದಿದ್ದವು. ಈ ವರ್ಷ 526 ಕೊಲೆಗಳು ನಡೆದಿದ್ದು, 181 ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಳಿಸಿರುವ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಎರಡು ಪ್ರಕರಣಗಳಲ್ಲಿ ಮಾತ್ರವೇ ಅಪರಾಧಿಗಳಿಗೆ ಶಿಕ್ಷೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯದ ಹಲವು ಕಡೆ ಗುಂಪು ಘರ್ಷಣೆ ಹಾಗೂ ಹಲ್ಲೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. 2022ರಲ್ಲಿ 15,380 ಹಲ್ಲೆ ಪ್ರಕರಣಗಳು ವರದಿ ಆಗಿದ್ದವು. 2023ರಲ್ಲಿ 17,405, 2024ರಲ್ಲಿ 16,991 ಪ್ರಕರಣಗಳು ದಾಖಲಾಗಿದ್ದವು. ಈ ವರ್ಷ ಆರು ತಿಂಗಳಲ್ಲಿ 6,952 ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ಹೇಳಿವೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ  975 ಪ್ರಕರಣಗಳು ದಾಖಲಾಗಿವೆ. 26 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 6,859 ಪ್ರಕರಣಗಳು ದಾಖಲಾಗಿವೆ. ಎರಡು ಪ್ರಕರಣಗಳಲ್ಲಿ ಮಾತ್ರವೇ ಶಿಕ್ಷೆ ಪ್ರಕಟವಾಗಿದೆ. ಉಳಿದ ಪ್ರಕರಣಗಳ ತನಿಖೆ ವಿವಿಧ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.

‘ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೆಲವು ಅಪರಾಧ ಪ್ರಕರಣಗಳು ಕಡಿಮೆ ಆಗಿವೆ. ಮನೆಗಳ್ಳತನ ಹೆಚ್ಚಾಗಿವೆ. ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಆಯಾ ಠಾಣೆಯ ಸಿಬ್ಬಂದಿಯನ್ನು ಮನೆ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸುವಂತೆ ಸೂಚಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಹಾಗೂ ಸಾರ್ವಜನಿಕರ ಸಮಸ್ಯೆಯನ್ನು ಖುದ್ದು ಆಲಿಸಲು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ‘ಮನೆ ಮನೆಗೆ ಪೊಲೀಸ್’ ಯೋಜನೆ ಜಾರಿಗೆ ತರಲಾಗಿದೆ
- ಜಿ.ಪರಮೇಶ್ವರ ಗೃಹ ಸಚಿವ

ಸದ್ದು ಮಾಡಿದ್ದ ಕೊಲೆ ಪ್ರಕರಣಗಳು

  • ವಿಜಯಪುರ: ಫೆ.11ರಂದು ಭೀಮಾ ತೀರದ ಕುಖ್ಯಾತ ರೌಡಿ ಚಂದಪ್ಪ ಹರಿಜನನ ಸಹಚರ ಬಾಗಪ್ಪ ಹರಿಜನ ಕೊಲೆ

  • ಬೆಂಗಳೂರು: ಮಾರ್ಚ್ 27ರಂದು ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿಯ ಮನೆಯೊಂದರಲ್ಲಿ ಪತ್ನಿ ಕೊಂದು ಮೃತದೇಹವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿಟ್ಟಿದ್ದ ಪತಿ

  • ದಕ್ಷಿಣ ಕನ್ನಡ: ಮೇ 1ರಂದು ರೌಡಿ ಶೀಟರ್ ಸುಹಾಸ್‌ ಶೆಟ್ಟಿ ಹತ್ಯೆ

  • ಬೆಂಗಳೂರು: ಜುಲೈ 15ರಂದು ರೌಡಿಶೀಟರ್‌ ಶಿವಪ್ರಕಾಶ್ ಅಲಿಯಾಸ್‌ ಬಿಕ್ಲು ಶಿವ ಕೊಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.