ADVERTISEMENT

ಸಾಲ ವಸೂಲಾತಿಗೆ ರೈತರ ಪೀಡಿಸಬೇಡಿ: ಸಚಿವ ಸತೀಶ ಜಾರಕಿಹೊಳಿ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 12:28 IST
Last Updated 7 ಮಾರ್ಚ್ 2024, 12:28 IST
<div class="paragraphs"><p>ಬೆಳಗಾವಿಯಲ್ಲಿ ಗುರುವಾರ ನಡೆದ ಬ್ಯಾಂಕ್‌ ಹಾಗೂ ಸಹಕಾರಿ ಪತ್ತಿನ ಸಂಘಗಳ ಪ್ರತಿನಿಧಿಗಳ ಸಭೆಯಲ್ಲಿ ಸಚಿವರಾದ ಸತೀಶ ಜಾರಕಿಹೊಳಿ ಮಾತನಾಡಿದರು. ಎಂ.ಎನ್.ಮಣಿ, ಶಾಸಕ ಆಸೀಫ್‌ ಸೇಠ್‌, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪ್ರಶಾಂತ ಕುಲಕರ್ಣಿ ಪಾಲ್ಗೊಂಡರು</p></div>

ಬೆಳಗಾವಿಯಲ್ಲಿ ಗುರುವಾರ ನಡೆದ ಬ್ಯಾಂಕ್‌ ಹಾಗೂ ಸಹಕಾರಿ ಪತ್ತಿನ ಸಂಘಗಳ ಪ್ರತಿನಿಧಿಗಳ ಸಭೆಯಲ್ಲಿ ಸಚಿವರಾದ ಸತೀಶ ಜಾರಕಿಹೊಳಿ ಮಾತನಾಡಿದರು. ಎಂ.ಎನ್.ಮಣಿ, ಶಾಸಕ ಆಸೀಫ್‌ ಸೇಠ್‌, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪ್ರಶಾಂತ ಕುಲಕರ್ಣಿ ಪಾಲ್ಗೊಂಡರು

   

ಬೆಳಗಾವಿ: ‘ರಾಜ್ಯದಾದ್ಯಂತ ಬರಗಾಲ ಇರುವ ಕಾರಣ ರೈತರಿಂದ ಯಾವುದೇ ಸಾಲ ವಸೂಲಾತಿಗೆ ಬಲವಂತದ ಕ್ರಮವಹಿಸಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಬ್ಯಾಂಕ್‌ ಹಾಗೂ ಸಹಕಾರಿ ಪತ್ತಿನ ಸಂಘಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಮುಖ ಸಹಕಾರಿ ಪತ್ತಿನ ಸಂಘಗಳು ಮತ್ತು ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ಜಿಲ್ಲೆಯಲ್ಲಿ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸಾಲ ವಸೂಲಾತಿಗೆ ಯಾವುದೇ ರೀತಿಯ ಒತ್ತಡ ಹೇರಬಾರದು. ಇದಲ್ಲದೇ ರೈತರ ಖಾತೆಗೆ‌ ಜಮೆಯಾಗುವ ವೃದ್ಧಾಪ್ಯ ವೇತನ ಅಥವಾ ಯಾವುದೇ ಸರ್ಕಾರಿ ಸೌಲಭ್ಯಗಳ ಹಣವನ್ನು ಸಾಲದ ಕಂತುಗಳಿಗೆ ಹೊಂದಾಣಿಕೆ‌ ಮಾಡಬಾರದು’ ಎಂದು ತಿಳಿಸಿದರು.

‘ಸರ್ಕಾರದಿಂದ ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿ ಸಾಲಸೌಲಭ್ಯಗಳನ್ನು ಹೆಚ್ಚು ಜನರಿಗೆ ತಲುಪಿಸಬೇಕು’ ಎಂದೂ ಸಲಹೆ ನೀಡಿದರು.

3 ತಿಂಗಳು ಸಾಲ ವಸೂಲಾತಿ ಬೇಡ: ‘ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಮುಂದಿನ ಮೂರು ತಿಂಗಳವರೆಗೆ ಬಲವಂತದ ಸಾಲ ವಸೂಲಾತಿ ಮಾಡಬಾರದು ಮತ್ತು ರೈತರಿಗೆ ನೋಟಿಸ್‌ ಜಾರಿಗೊಳಿಸಿ ತೊಂದರೆ ನೀಡಬಾರದು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಬ್ಯಾಂಕುಗಳು ಮಾತ್ರವಲ್ಲದೇ, ಖಾಸಗಿ ಲೇವಾದೇವಿದಾರರಿಂದ ಕೂಡ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವಂತೆಯೂ’ ಅವರು ತಿಳಿಸಿದರು.

ಶಾಸಕ ಆಸಿಫ್ ಸೇಠ್, ಸಹಕಾರಿ ಸಂಘಗಳ ಜಂಟಿ ನಿಬಂಧಕರಾದ ಸುರೇಶ್ ಗೌಡ, ಸಹಕಾರಿ‌ ಸಂಘಗಳ ಉಪ ನಿಬಂಧಕ ಎಂ.ಎನ್.ಮಣಿ ಹಾಗೂ ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಪ್ರಶಾಂತ ಕುಲಕರ್ಣಿ ಹಾಗೂ ವಿವಿಧ ರೈತ ಸಂಘಗಳ ಸದಸ್ಯರು, ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.