ADVERTISEMENT

ಕಾಂಗ್ರೆಸ್ ರಾಡಿ ತೊಳೆಯಲು ನಮಗೆ ಇನ್ನೂ ಆಗಿಲ್ಲ: ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 7:21 IST
Last Updated 26 ಜನವರಿ 2023, 7:21 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್    

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದವರು ಈ ಹಿಂದೆ ವಿಧಾನಸೌಧದಲ್ಲಿ ಮಾಡಿರುವ ರಾಡಿಯನ್ನು ನಮ್ಮಿಂದ ತೊಳೆಯಲು ಇನ್ನು ಆಗುತ್ತಿಲ್ಲ, ಇನ್ನೂ ಅವರು ತೊಳೆಯುತ್ತಾರೆಂಬುದು ಹಾಸ್ಯಾಸ್ಪದ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ನಾವು ಅಧಿಕಾರಕ್ಕೆ ಬಂದು ಬಿಜೆಪಿಯವರು ವಿಧಾನಸೌಧದಲ್ಲಿ ಮಾಡಿದ ರಾಡಿಯನ್ನು ತೊಳೆದು ಹಾಕುತ್ತೇವೆಂಬ ಕಾಂಗ್ರೆಸ್ ಹೇಳಿಕೆಗೆ, ನಗರದಲ್ಲಿ ಗುರುವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.

ಕಾಂಗ್ರೆಸ್'ನವರು ಅಧಿಕಾರದಲ್ಲಿದ್ದಾಗ ಅರ್ಕಾವತಿ ಹಗರಣದಲ್ಲಿ ಸುಮಾರು 900 ಎಕರೆ ಜಮೀನನ್ನು ಡಿನೋಟಿಫೀಕೇಶನ್ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್'ನವರು ವಿಧಾನಸೌಧದ ರಾಡಿ ತೊಳೆಯುತ್ತೇವೆಂಬುದು ಹಾಸ್ಯಾಸ್ಪದ. ಅವರೇ ಹಿಂದೆ ರಾಡಿ ಮಾಡಿ ಹೋಗಿದ್ದಾರೆ. ಇದೀಗ ನಮಗೂ ಅವರ ರಾಡಿಯನ್ನು ತೊಳೆಯಲು ಆಗುತ್ತಿಲ್ಲ. ಹೀಗಾಗಿ ಅವರಿಗೆ ಮಾತನಾಡಲು ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.

ADVERTISEMENT

ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕಾಂಗ್ರೆಸ್ ದೂರಿನ ಕುರಿತು ಪ್ರತಿಕ್ರಿಯೆ ನೀಡಿದ ಶೆಟ್ಟರ್, ಇನ್ನೊಂದು ಚುನಾವಣೆ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂತಹ ಗಿಮಿಕ್ ಮಾಡುತ್ತಿದೆ. ಅದರಲ್ಲಿ ಯಾವುದೇ ಅರ್ಥವಿಲ್ಲ. ದೂರು ಕೊಟ್ಟು ಪ್ರಚಾರ ತೆಗೆದುಕೊಳ್ಳುವ ಎಂತಹ ಕೀಳುಮಟ್ಟಕ್ಕೆ ಕಾಂಗ್ರೆಸ್ ಹೋಗಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದರು.

ಚುನಾವಣೆ ಬಗ್ಗೆ ಕಳಕಳಿ ಇದ್ದರೆ, ಹಿಂದೆ ಕಾಂಗ್ರೆಸ್'ನವರು ಚುನಾವಣೆ ಮಾಡಿದ್ದಾರೆ. ಆಗ ಯಾವ ರೀತಿ ಚುನಾವಣೆ ಮಾಡಿದ್ದಾರೆ ಗೊತ್ತಿದೆ. ಹೀಗಾಗಿ ಮತ್ತೊಬ್ಬರಿಗೆ ಬುದ್ದಿ ಹೇಳೋದು ಬೇಕಾಗಿಲ್ಲ. ಕಾಂಗ್ರೆಸ್'ನ ಕುಕ್ಕರ್ ರಾಜಕೀಯ ಬಹಿರಂಗಗೊಂಡಿದೆ‌. ಬೇರೆಯವರ ಬಗ್ಗೆ ಮಾತನಾಡಲು ಕಾಂಗ್ರೆಸ್'ನವರಿಗೆ ನೈತಿಕತೆ ಇದೆಯಾ? ಎಂದು ಪ್ರಶ್ನೆ ಮಾಡಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಧಾರವಾಡ ಜಿಲ್ಲೆಯ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ಸಂಘಟನೆ ಮತ್ತು ಸರ್ಕಾರದ ವ್ಯವಸ್ಥೆಯಲ್ಲಿ ಸುಧಾರಣೆ ಇದರ ಜೊತೆಗೆ, ಈ ಭಾಗದ ಅಭಿವೃದ್ಧಿಗೆ ಒತ್ತು ಕೊಡುವ ಕೆಲಸವನ್ನು ಅಮಿತ್ ಶಾ ಮಾಡಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.